ಕೃಷಿ ಸಾಲ ಮನ್ನಾಕ್ಕೆ ಒತ್ತಾಯಿಸಿ ರಸ್ತೆ ತಡೆ
ಮಂಡ್ಯ

ಕೃಷಿ ಸಾಲ ಮನ್ನಾಕ್ಕೆ ಒತ್ತಾಯಿಸಿ ರಸ್ತೆ ತಡೆ

July 12, 2018

ಭಾರತೀನಗರ:  ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಬುಧವಾರ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಲ್ಲಿನ ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಯನ್ನು ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತರು ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಬರಗಾಲಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಹಾಗೂ ಕೃಷಿಗಾಗಿ ಸಾಲ ಸಿಗದಿದ್ದ ಸಂದರ್ಭದಲ್ಲಿ ಚಿನ್ನಾ ಭರಣ ಗಳನ್ನು ಆರ್‍ಟಿಸಿಕೊಟ್ಟು ಅಡವಿಟ್ಟಿದ್ದಾರೆ. ಆ ಹಣದಿಂದ ಕೃಷಿ ಚಟುವಟಿಕೆಯನ್ನು ಮಾಡಿದ್ದಾರೆ. ಚುನಾವಣೆ ಪೂರ್ವ ದಲ್ಲಿ ನೀಡಿದ ಪ್ರಣಾಳಿಕೆಯಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಡೆದುಕೊಳ್ಳಬೇಕು.

ರೈತರ ಎಲ್ಲಾ ಕೃಷಿಸಾಲ ಹಾಗೂ ಸ್ತ್ರೀಶಕ್ತಿ ಸಾಲವನ್ನು ಮನ್ನಾ ಮಾಡಬೇಕು. ಜೊತೆಗೆ ಹೊಸ ಕೃಷಿ ಚಟುವಟಿಗಾಗಿ ಮತ್ತೆ ಸಾಲ ನೀಡಬೇಕು ಎಂದು ಒತ್ತಾಯಿಸಿದರು. ರೈತರ ಸಂಪೂರ್ಣ ಸಾಲ ಮನ್ನಾ ಮಾಡದಿ ದ್ದರೆ ಸಾಲದ ಸುಳಿಗೆ ಸಿಲುಕಿ ಸಾಲದಿಂದ ಹೊರ ಬರಲಾಗದೆ ರೈತರು ಆತ್ಮಹತ್ಯೆಗೆ ಶರಣಾಗಲು ರಾಜ್ಯಸರ್ಕಾರವೇ ಕಾರಣ ಎಂದು ಆರೋಪಿಸಿದರು. ಪಡಿತರ ಚೀಟಿದಾರರಿಗೆ 2 ಕೆ.ಜಿ. ಅಕ್ಕಿಯನ್ನು ಕಡಿತ ಮಾಡದೆ 7 ಕೆ.ಜಿಯಂತೆ ಮುಂದುವರಿಸ ಬೇಕು. ಪ್ರಸಕ್ತ ಸಾಲಿನಿಂದ ಟನ್ ಕಬ್ಬಿಗೆ 3,500 ರೂ.ದರ ನಿಗದಿ ಪಡಿಸಬೇಕು. ಕಾರ್ಖಾನೆಗಳಲ್ಲಿ ಉಳಿಸಿಕೊಂಡಿರುವ ಬಾಕಿ ಹಣವನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹಾಲಿನ ಒಕ್ಕೂಟಗಳು ಹಾಲಿನ ದರವನ್ನು ಇಳಿಸಿದ್ದು, ರೈತರು 1 ಲೀಟರ್ ಹಾಲು ಉತ್ಪಾದಿಸಲು 25ರೂ ಖರ್ಚು ಆಗುತ್ತಿದೆ.

ಆದ್ದರಿಂದ ಕನಿಷ್ಠ 1 ಲೀಟರ್ ಹಾಲಿಗೆ 30 ರೂ ನಿಗದಿಪಡಿಸಿ ಹಾಲು ಉತ್ಪಾದಕರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಬೋರಾಪುರದ ಶಂಕರೇಗೌಡ, ಮುಖಂಡರಾದ ವೈ.ಕೆ. ರಾಮೇಗೌಡ, ರಾಮಲಿಂಗೇಗೌಡ, ಸೋಷಿಪ್ರಕಾಶ್, ಕೆ.ಜಿ.ಉಮೇಶ್, ಬೊಪ್ಪಸಮುದ್ರದ ರಾಮಣ್ಣ, ಚಂದ್ರಶೇಖರ್, ಮಠದದೊಡ್ಡಿ ಕೆಂಪಣ್ಣ, ನಗರಕೆರೆ ಶ್ರೀಧರ್, ಸತೀಶ್, ಮರಿಯಪ್ಪ, ಗೆಂಡಸಯ್ಯ, ಶಂಕರ್, ಮಹದೇವಪ್ಪ, ನಿಂಗಯ್ಯ ಇದ್ದರು.

Translate »