ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಹೆಸರೇಳಿಕೊಂಡು ನಿವೃತ್ತ ಪೊಲೀಸ್ ಅಧಿಕಾರಿ ಯೊಬ್ಬರಿಂದ 10 ಲಕ್ಷ ರೂ. ಪಡೆದು, ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕೆಪಿಎಸ್ಸಿ ಅಧ್ಯಕ್ಷ ಶ್ಯಾಂಭಟ್ ಅವರು ಪರಿಚಿತ ರಾಗಿದ್ದು, ನಿಮ್ಮ ಮಗನಿಗೆ ಅಬಕಾರಿ ಇನ್ಸ್ಪೆಕ್ಟರ್ ಕೆಲಸ ಕೊಡಿಸುವುದಾಗಿ ನಂಬಿಸಿ, ಸಿಎಆರ್ನ ನಿವೃತ್ತ ಆರ್ಎಸ್ಐ ಸಿದ್ದಯ್ಯ ಅವರನ್ನು ವಂಚಿಸ ಲಾಗಿದೆ. ಈ ಸಂಬಂಧ ಧನರಾಜ್ ಹಾಗೂ ಪ್ರದೀಪ್ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಮ್ಮ ಪುತ್ರ ನಾಗೇಂದ್ರನಿಗೆ ಅಬಕಾರಿ ಇನ್ಸ್ಪೆಕ್ಟರ್ ಹುದ್ದೆ ಕೊಡಿಸಲು ಸಹಾಯ ಮಾಡುವುದಾಗಿ ನಂಬಿಸಿದ್ದ ಧನರಾಜ್ ಮತ್ತು ಪ್ರದೀಪ್, 20 ಲಕ್ಷ ರೂ. ಕೊಡುವು ದಾದರೆ ಕೆಪಿಎಸ್ಸಿ ಅಧ್ಯಕ್ಷರಾದ ಶ್ಯಾಂಭಟ್ ಅವರನ್ನು ಪರಿಚಯಿಸಿ, ಮುಂದಿನ ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿದ್ದರು. ಅವರ ಮಾತನ್ನು ನಂಬಿ ಗಾಂಧಿನಗರದ ಖಾಸಗಿ ಹೋಟೆಲ್ನಲ್ಲಿ ಧನರಾಜ್ಗೆ ಮೊದಲ ಕಂತಾಗಿ 4.5 ಲಕ್ಷ ರೂ. ಹಾಗೂ ಕೆಲ ದಿನಗಳ ನಂತರ 5.50 ಲಕ್ಷ ರೂ. ಒಟ್ಟು 10 ಲಕ್ಷ ರೂ. ಹಣ ನೀಡಿದ್ದೆ. ಹಣ ಪಡೆದಿದ್ದ ಆತ, ಕೆಪಿಎಸ್ಸಿ ಪ್ರಕಟಿಸುವ 2ನೇ ಲಿಸ್ಟ್ನಲ್ಲಿ ನಿಮ್ಮ ಮಗನ ಹೆಸರಿರುತ್ತದೆ ಎಂದು ಭರವಸೆ ನೀಡಿದ್ದ. ಆದರೆ ನೇಮಕವಾದವರ ಪಟ್ಟಿಯಲ್ಲಿ ನನ್ನ ಮಗನ ಹೆಸರಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ನೀವು ಕೊಟ್ಟ 10 ಲಕ್ಷ ರೂ. ಹಣವನ್ನು ಶ್ಯಾಂ ಭಟ್ ಅವರಿಗೆ ನೀಡಿದ್ದೇವೆಂದು ತಿಳಿಸಿದ್ದಾರೆ. ಕೆಲಸ ಕೊಡಿಸುವುದಾಗಿ ನಂಬಿಸಿ, 10 ಲಕ್ಷ ರೂ. ವಂಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿದ್ದಯ್ಯ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.