ಕೆರೆ-ಕಟ್ಟೆ ಉಳಿವಿಗಾಗಿ ಪಣ ತೊಡಿ
ಮೈಸೂರು

ಕೆರೆ-ಕಟ್ಟೆ ಉಳಿವಿಗಾಗಿ ಪಣ ತೊಡಿ

June 12, 2019

ಮೈಸೂರು: ನಾನೊಬ್ಬ ಕೆರೆ ಕಟ್ಟಿದರೆ ಸಾಲದು. ನಿಮಗೆ ಸ್ಥಳ ಕೊಟ್ಟು ಮುಂದಕ್ಕೆ ಹೋಗುವಷ್ಟು ವಯಸ್ಸು ನನಗಾಗಿದ್ದು, ನೀವೆಲ್ಲಾ ಕೆರೆ-ಕಟ್ಟೆ ಉಳಿವಿ ಗಾಗಿ ಪಣ ತೊಡಬೇಕು ಎಂದು ಅಲ್ಲಿ ನೆರೆದಿದ್ದ ವಿದ್ಯಾರ್ಥಿ ಸಮೂಹಕ್ಕೆ ತಮ್ಮ ಮುಗ್ಧ ದನಿಯಲ್ಲಿ ತಿಳಿಸಿದರು ಆ ಹಿರಿಯ ಪರಿಸರ ಪ್ರೇಮಿ.

ಹೌದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಿಜಿ ಪುರ ಹೋಬಳಿಯ ದಾಸನದೊಡ್ಡಿ ಗ್ರಾಮದ ಪರಿಸರ ಪ್ರೇಮಿ ಕೆರೆ ಕಾಮೇಗೌಡ ಅವರ ಕಳಕಳಿಯ ನುಡಿಗಳಿವು. ಇವರು 14 ಕೆರೆಗಳನ್ನು ನಿರ್ಮಿಸಿ ಹಲವು ಪ್ರಶಸ್ತಿಗಳಿಗೆ ಭಾಜನ ರಾಗಿ ನಾಡಿನಲ್ಲಿ ಖ್ಯಾತನಾಮರಾಗಿದ್ದಾರೆ.

ಮೈಸೂರಿನ ನಂಜುಮಳಿಗೆ ಸಮೀಪದ ಗೋಪಾಲಸ್ವಾಮಿ ಶಿಶುವಿಹಾರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜನಚೇತನ ಟ್ರಸ್ಟ್ ಹಾಗೂ ಸ್ವದೇಶಿ ಜಾಗರಣ ಮಂಚ್ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಬೀಜದ ಚೆಂಡು ತಯಾರಿಕೆ ಕಾರ್ಯಾಗಾರ ಉದ್ಘಾಟಿಸಿ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಕೆರೆ ಕಾಮೇಗೌಡರು, ತಮ್ಮ ಮುಗ್ಧ ದನಿಯಲ್ಲಿ ಪರಿಸರ ಕಳಕಳಿ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚಿದರು.

ನಾನು ಕೆರೆ ಕಟ್ಟಿರುವುದು ನನಗಲ್ಲ, ನಿಮ್ಮಂತಹ ವಿದ್ಯಾರ್ಥಿಗಳು ಹಾಗೂ ಯುವ ಜನಕ್ಕಾಗಿ. ನಾನು ಓಂಟೋಯ್ತಿನಿ (ಸತ್ತ ನಂತರ) ನೀವೆಲ್ಲ ಕೆರೆ-ಕಟ್ಟೆ ಹಾಗೂ ಪರಿಸರ ಸಂರಕ್ಷಣೆ ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಕೆರೆ ಕಟ್ಟುವಂತೆ ನಿಮ್ಮ ಅಪ್ಪ ಅವ್ವನಿಗೆ ಒತ್ತಾಯಿಸಬೇಕು. ಸುಧಾರಣೆಗೆ ರಾಜಕಾರಣಿಗಳನ್ನು ನಂಬಿ ಕೂತರೆ ಪ್ರಯೋ ಜನವಿಲ್ಲ ಎಂದು ಸಲಹೆ ನೀಡಿದರು.

ವೃಕ್ಷ ಶಿವನಿಗಿಂತಲೂ ದೊಡ್ಡದು. ಗಂಗಮ್ಮ ಶಿವನಿಗಿಂತಲೂ ದೊಡ್ಡವಳು. ವೃಕ್ಷ-ಗಂಗಮ್ಮರನ್ನು ಉಳಿಸಿಕೊಳ್ಳಬೇಕು. ಇತ್ತೀಚೆಗೆ ಸರಿಯಾಗಿ ಮೋಡ ಕಟ್ಟುತ್ತಿಲ್ಲ. ಮಳೆ ಬೀಳುತ್ತಿಲ್ಲ. ಕೆರೆ ಕಟ್ಟೆಗಳು ಬತ್ತಿ ಹೋಗುತ್ತಿವೆ. ಮರ ಗಿಡಗಳನ್ನು ನೆಟ್ಟು ಪೆÇೀಷಿಸಿ ಮಳೆಯಾಗುವಂತೆ ಮಾಡಬೇಕು. ಈ ಜವಾಬ್ದಾರಿಯನ್ನು ಯುವ ಪೀಳಿಗೆಯೇ ಹೊರಬೇಕು. ಮಕ್ಕಳು ಹಠ ಮಾಡಿ, ಉಪ ವಾಸ ಮಾಡಿ ಪೆÇೀಷಕರು ಕೆರೆ ಕಟ್ಟುವಂತೆ ಪ್ರೇರೇಪಿಸಬೇಕು. ಇಲ್ಲವಾದಲ್ಲಿ ಗಿಡಗಳ ನ್ನಾದರೂ ನೆಟ್ಟು ಪೆÇೀಷಣೆ ಮಾಡುವಂತೆ ಒತ್ತಾಯಿಸಿ ಎಂದು ಮಕ್ಕಳಿಗೆ ಕರೆಕೊಟ್ಟರು.

ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ ಮಾತನಾಡಿ, ಕಿರುಗಾವಲಿ ಹಾಗೂ ಕಾವಲಿಗಳನ್ನು ಉಳಿಸಿಕೊಳ್ಳುವ ಮೂಲಕ ಉಪ ನದಿಗಳನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ ನದಿಗಳು ಬತ್ತಿ ಹೋಗುತ್ತವೆ. ಹೀಗಾಗಿ ಕಾವೇರಿ ನದಿ ಉಳಿಸಿಕೊಳ್ಳಲು ಅನಿವಾರ್ಯ ಕ್ರಮ ತೆಗದುಕೊಳ್ಳಬೇಕಿದೆ. ಅದಕ್ಕಾಗಿ ಬರಡು ಭೂಮಿ ಮತ್ತು ಖಾಲಿ ಗುಡ್ಡಗಳಲ್ಲಿ ಕಾಡು ಬೆಳೆಸಬೇಕು. ಅದಕ್ಕಾಗಿ ಬೀಜದ ಚೆಂಡು ಅಭಿಯಾನ ಹಮ್ಮಿಕೊಳ್ಳ ಲಾಗಿದೆ. ನಂಜನಗೂಡು ಬಳಿಯ ಮುಳ್ಳು ಗುಡ್ಡದಲ್ಲಿ 250 ಜಾತಿಯ 2 ಲಕ್ಷದ ಬೀಜ ದುಂಡೆಗಳನ್ನು ಹಾಕಲು ಉದ್ದೇಶಿಸಲಾಗಿದೆ. ಇದರ ಜೊತೆಗೆ 10 ಸಾವಿರ ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗೋಪಾಲಸ್ವಾಮಿ ಶಿಶುವಿಹಾರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸ್ವದೇಶಿ ಜಾಗರಣ ಮಂಚ್‍ನ ರಾಜ್ಯ ಸಂಯೋಜಕ ಎನ್.ಆರ್.ಮಂಜುನಾಥ್ ಮತ್ತಿತರರು ಹಾಜರಿದ್ದರು.

Translate »