ಮೈಸೂರು, ಡಿ. 10(ಆರ್ಕೆ)- ತೆರಿಗೆ ಪಾವತಿಸದ ಹಾಗೂ ಟ್ರೇಡ್ ಲೈಸೆನ್ಸ್ ಪಡೆಯದ ಹೋಟೆಲ್, ಅಂಗಡಿಗಳ ಮೇಲೆ ದಾಳಿ ನಡೆಸಿರುವ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಅವುಗಳ ಬಾಗಿಲು ಬಂದ್ ಮಾಡಿಸಿದ್ದಾರೆ.
ಮೈಸೂರು ಮಹಾ ನಗರ ಪಾಲಿಕೆ ಪ್ರಧಾನ ಕಚೇರಿ ಹಿಂಭಾಗದ ಫೋರ್ಟ್ ಮೊಹಲ್ಲಾದಲ್ಲಿರುವ ಟ್ರೂ ಸ್ಪಿರಿಟ್, ಅದ್ಧೂರಿ ಕಂಫಟ್ರ್ಸ್, ನಂದ ಹೋಟೆಲ್, ಸುಪ್ರಿಯಾ ಲಾಡ್ಜ್ಗಳ ಮೇಲೆ ಇಂದು ಬೆಳಿಗ್ಗೆ ದಾಳಿ ನಡೆಸಿ ಬಾಗಿಲು ಬಂದ್ ಮಾಡಿಸಲಾಯಿತು ಎಂದು ಪಾಲಿಕೆ ವಲಯ ಕಚೇರಿ-1ರ ಕಂದಾಯ ನಿರೀಕ್ಷಕ ಮಂಜುನಾಥ್ ತಿಳಿಸಿದ್ದಾರೆ.
ಒಂದು ಲಕ್ಷ ರೂ. ಮೇಲ್ಪಟ್ಟು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವುದಲ್ಲದೆ ಟ್ರೇಡ್ ಲೈಸೆನ್ಸ್ ನವೀಕರಿಸಿಕೊಳ್ಳದೆ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದ ಹೋಟೆಲ್ಗಳ ಮಾಲೀಕರಿಗೆ 3 ದಿನಗಳಲ್ಲಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ತಿಳಿಸಿದರು. ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರ ನಿರ್ದೇಶನದಂತೆ ನಡೆದ ದಾಳಿಯಲ್ಲಿ ಕಂದಾಯ ಸಿಬ್ಬಂದಿಗಳಾದ ಸುರೇಶ್ಕುಮಾರ್, ಪುತ್ತುರಾಜ್, ಪ್ರತಾಪ್ ಹಾಗೂ ಇತರರು ಪಾಲ್ಗೊಂಡಿದ್ದರು.