ಟೆಂಪೋ ಟ್ರಾವೆಲರ್-ಬೈಕ್ ಮುಖಾಮುಖಿ ಡಿಕ್ಕಿ ಸವಾರ ಸಾವು
ಕೊಡಗು

ಟೆಂಪೋ ಟ್ರಾವೆಲರ್-ಬೈಕ್ ಮುಖಾಮುಖಿ ಡಿಕ್ಕಿ ಸವಾರ ಸಾವು

February 10, 2019

ಮಡಿಕೇರಿ: ಟೆಂಪೋ ಟ್ರಾವೆ ಲರ್ ಮತ್ತು ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ಎಸ್ಟೇಟ್ ಬಳಿ ನಡೆದಿದೆ. ಮೈಸೂರು-ಹೆಚ್.ಡಿ.ಕೋಟೆ ರಸ್ತೆಯ ಮಾದ್ರಳ್ಳಿ ಗ್ರಾಮದ ನಿವಾಸಿ ಬಸವ(32) ಎಂಬಾತನೇ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಬೈಕ್‍ಗೆ ಡಿಕ್ಕಿ ಹೊಡೆದ ಬಳಿಕ ಟೆಂಪೋ ಟ್ರಾವೆಲರ್ ವಾಹನ ರಾಷ್ಟ್ರೀಯ ಹೆದ್ದಾರಿ ಬದಿ ಯಿದ್ದ ಜಾಹೀರಾತು ಫಲಕಕ್ಕೆ ಡಿಕ್ಕಿ ಹೊಡೆದು ನಿಂತಿದ್ದು, ಅಪ ಘಾತದ ತೀವ್ರತೆಗೆ ಸಾಕ್ಷಿ ಹೇಳುತ್ತಿದೆ.

ಘಟನೆ ವಿವರ: ಕೇರಳದ ಪ್ರವಾಸಿಗರನ್ನು ಕೊಡಗು ಜಿಲ್ಲೆಗೆ ಪ್ರವಾ ಸಕ್ಕೆಂದು ಕರೆತಂದಿದ್ದ ಕಾಸರಗೋಡು ಜಿಲ್ಲೆಯ ಮುಳ್ಳೇರಿ ಯಾದ ಟೆಂಪೋ ಟ್ರಾವೆಲರ್ ವಾಹನ(ಕೆ.ಎಲ್.11 ಎಜಿ7011) ಕುಶಾ ಲನಗರದ ಗೋಲ್ಡನ್ ಟೆಂಪಲ್ ವೀಕ್ಷಿಸಿ ಮಡಿಕೇರಿ ಕಡೆಗೆ ಬರುತ್ತಿತ್ತು.

ಮಾದ್ರಳ್ಳಿ ಗ್ರಾಮದ ನಿವಾಸಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಬಸವ ಎಂಬಾತ ಮಧ್ಯಾಹ್ನ 1.30ರ ಸಮಯದಲ್ಲಿ ಸಹ ಕೆಲಸದವನಾದ ಸುಬ್ಬಣ್ಣ ಎಂಬುವವರನ್ನು ಬೈಕ್‍ನ (ಕೆ.ಎ.55.ವಿ.0016) ಹಿಂಬದಿಯಲ್ಲಿ ಕೂರಿಸಿಕೊಂಡು ಸುಂಟಿಕೊಪ್ಪದಿಂದ ಕುಶಾಲನಗರ ಸಮೀಪದ ಗಂಧದಕೋ ಟೆಗೆ ತೆರಳುತ್ತಿದ್ದ. ಮಾರ್ಗ ಮಧ್ಯೆ ಶಾಂತಿಗೇರಿ ಎಸ್ಟೇಟ್‍ನ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್, ಗೋಲ್ಡನ್ ಟೆಂಪಲ್‍ನಿಂದ ಹಿಂತಿರುಗುತ್ತಿದ್ದ ಟೆಂಪೋ ಟ್ರಾವೆಲರ್‍ನ ಮುಂಭಾಗದ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಬಸವ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಟೆಂಪೋ ಟ್ರಾವೆಲರ್ ವಾಹನ ಚಾಲಕ ರಜಾಕ್ ಎಂಬಾತ, ಬೈಕ್‍ಗೆ ರಾಂಗ್ ಸೈಡ್ ನಿಂದ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ್ದಾನೆ. ಆದರೆ ಚಾಲಕನ ನಿಯಂತ್ರಣ ಕಳೆದುಕೊಂಡ ವ್ಯಾನ್ ಮುನ್ನುಗ್ಗಿ ರಾಷ್ಟ್ರೀಯ ಹೆದ್ದಾರಿ 275ಗೆ ಹೊಂದಿಕೊಂಡಿರುವ ತೋಟದ ಬೇಲಿ ಬದಿಯಲ್ಲಿದ್ದ ದೊಡ್ಡದಾದ ಜಾಹೀರಾತು ಫಲಕಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ವ್ಯಾನ್‍ನಲ್ಲಿದ್ದ 12 ಮಂದಿ ಪ್ರವಾಸಿ ಗರು ಹಾಗೂ ಬೈಕ್‍ನ ಹಿಂಬದಿ ಸವಾರ ಸುಬ್ಬಣ್ಣ ಯಾವುದೇ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಕುಶಾಲನಗರ ಡಿವೈಎಸ್‍ಪಿ ಮುರಳೀಧರ್, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿದರು.

ಘಟನೆ ಕುರಿತಂತೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಶಾಲನಗರದ ಸರಕಾರಿ ಆಸ್ಪತ್ರೆ ಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.

Translate »