ದೊಡ್ಡಮ್ಮನನ್ನೇ ಇರಿದು ಕೊಂದ ಮಗ
ಕೊಡಗು

ದೊಡ್ಡಮ್ಮನನ್ನೇ ಇರಿದು ಕೊಂದ ಮಗ

December 17, 2019

ಮಡಿಕೇರಿ, ಡಿ.16- ಆಸ್ತಿ ವಿವಾದ ಹಿನ್ನೆಲೆಯಲ್ಲಿ ದೊಡ್ಡಮ್ಮನನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಡಿಕೇರಿ ಜೋಡುಪಾಲ ರಾಷ್ಟ್ರೀಯ ಹೆದ್ದಾರಿಯ ನಡುವಿನಲ್ಲಿರುವ ಅಬ್ಬಿಕೊಲ್ಲಿ ಬಳಿ ನಡೆದಿದೆ.

ಜೋಡುಪಾಲದ ಕುಡಿಯರ ಕಾಲೋನಿ ನಿವಾಸಿ ಕುಡಿಯರ ಹೊನ್ನಮ್ಮ(52) ಹತ್ಯೆಯಾದ ಮಹಿಳೆ. ತಮ್ಮ ಸಂಬಂಧಿಯೇ ಆದ ಆನಂದ ಎಂಬಾತನೇ ಚಾಕುವಿನಿಂದ ಇರಿದ ಆರೋಪಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಹತ್ಯೆಗೆ ಆಸ್ತಿ ಮತ್ತು ರಸ್ತೆ ವಿವಾದ ಕಾರಣ ಎಂದು ಹೇಳಲಾಗುತ್ತಿದ್ದು, ನಿಖರ ಕಾರಣ ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.

ಘಟನೆ ವಿವರ: ಜೋಡುಪಾಲ ಅಬ್ಬಿಕೊಲ್ಲಿಯ ಬಳಿ ಇರುವ ಕುಡಿಯರ ಕಾಲೋನಿಯ ವೆಂಕಪ್ಪ ಮತ್ತು ಹೊನ್ನಮ್ಮ ದಂಪತಿ ವಾಸವಾಗಿದ್ದರು. ಆಸ್ತಿ ಮತ್ತು ರಸ್ತೆ ವಿವಾದÀದ ಕುರಿತಂತೆ ಇವರಿಗೂ ಸಂಬಂಧಿ ಆನಂದ ಎಂಬುವವರ ನಡುವೆ ಹಲವು ದಿನಗಳಿಂದ ವೈಷಮ್ಯ ಇತ್ತು ಎನ್ನಲಾಗಿದೆ. ಸೋಮವಾರ ಸಂಜೆ 6 ಗಂಟೆಯ ಸಮಯದಲ್ಲಿ ಹೊನ್ನಮ್ಮ ಮತ್ತು ಆನಂದ ನಡುವೆ ಮಾತಿಗೆ ಮಾತು ಬೆಳೆದು ಇದು ತೀರಾ ವಿಕೋಪಕ್ಕೆ ತಿರುಗಿದೆ ಎಂದು ಹೇಳಲಾಗಿದೆ. ಈ ಸಂದರ್ಭ ಆನಂದ ತನ್ನ ಬಳಿ ಇದ್ದ ಚಾಕುವಿನಿಂದ ಹೊನ್ನಮ್ಮ ಅವರಿಗೆ ಇರಿದಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಹೊನ್ನಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್, ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ ವಿಭಾಗದ ಸಿಬ್ಬಂದಿ ತೆರಳಿದ್ದು, ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

Translate »