ವಾಷಿಂಗ್ಟನ್: ಭಾರತದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಬಿಜೆಪಿ ಹಿಂದುತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದರೇ ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೋಮು ಗಲಭೆ ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕಾ ಗುಪ್ತಚರ ಇಲಾಖೆ ವರದಿ ಮಾಡಿದೆ. 2019ರಲ್ಲಿ ಜಗತ್ತಿನಲ್ಲಿ ಉಂಟಾಗಬಹುದಾದ ಅಪಾಯ ಸಂದರ್ಭಗಳ ಪರಿಶೀಲನೆ ಕೈಗೊಂಡಿರುವ ಅಮೆರಿಕಾ ಗುಪ್ತಚರ ಇಲಾಖೆ ಭಾರತದಲ್ಲಿ ಕೋಮು ಗಲಭೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ. ಈ ವರದಿಯನ್ನು ಅಮೆರಿಕಾ ಸೆನೆಟ್ಗೆ ತಿಳಿಸಿದೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂದೂ ರಾಷ್ಟ್ರೀಯತೆಗೆ ಒತ್ತು ನೀಡಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕೋಮು ಗಲಭೆ ಉಂಟಾಗುವ ಸಾಧ್ಯತೆಯಿದೆ. ಹಿಂದುತ್ವ ಬೆಂಬಲಿಸುವ ನಾಯಕರು ಹಿಂದೂ ರಾಷ್ಟ್ರೀಯತೆ ಪ್ರಚಾರದಲ್ಲಿ ತೊಡಗಿದರೇ ಅವರ ಬೆಂಬಲಿಗರು ಗಲಭೆ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಹೇಳಿದೆ. 2019ರ ಮೇನಲ್ಲಿ ಪ್ರಧಾನಿ ಮೋದಿ ಅವರ 5 ವರ್ಷಗಳ ಆಡಳಿತ ಮುಗಿಯುತ್ತದೆ. ಮೇ ಅಂತ್ಯದೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮುಗಿದಿರುತ್ತವೆ. ಅದೇ ವೇಳೆ ಭಾರತ ಮತ್ತು ಪಾಕಿಸ್ತಾನ ಸಂಬಂಧ ಕೂಡ ಹದಗೆಟ್ಟಿದೆ ಎಂದು ವರದಿ ತಿಳಿಸಿದೆ.