ಬೆಂಗಳೂರು: ಮೈಸೂರಿನಿಂದ ಕೊಡಗು ಮಾರ್ಗವಾಗಿ ಕೇರಳದ ತಲಚೇರಿಗೆ ರೈಲು ಮಾರ್ಗ ನಿರ್ಮಾಣದ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಸರ್ಕಾರಿ ವಕೀಲರು ತಿಳಿಸಿದ ಮೇರೆಗೆ ಹೈಕೋರ್ಟ್ ದ್ವಿಸದಸ್ಯ ಪೀಠವು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾ ಸಕ್ತಿ ಅರ್ಜಿಯನ್ನು ವಜಾ ಮಾಡಿತು.
ಮೈಸೂರಿನಿಂದ ಕೊಡಗು ಮೂಲಕ ತಲಚೇರಿಗೆ ರೈಲು ಮಾರ್ಗ ನಿರ್ಮಾಣ ಮತ್ತು ಕೊಡಗಿನಲ್ಲಿ ಚತುಷ್ಟಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿರುದ್ಧ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ 2018ರಲ್ಲಿ ಹೈ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಯೋಜನೆಗಳಿಂದ ಕೊಡಗಿನ ಪರಿಸರ, ಹವಾಮಾನ ಹಾಗೂ ಪ್ರಾಕೃತಿಕವಾಗಿ ರಚನೆಯಾಗಿರುವ ಲಕ್ಷಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ವಾದ ಮಂಡಿಸಿತ್ತು.
ಕೇಂದ್ರ ಸರ್ಕಾರದ ಪರವಾಗಿ ಇಂದು ನ್ಯಾಯಾಲಯಕ್ಕೆ ಹಾಜರಾದ ವಕೀಲರು, ಈ ಯೋಜನೆಗಳ ಅನುಷ್ಠಾನದ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಇದಕ್ಕೆ ಸಂಬಂಧಪಟ್ಟ ಕಾರ್ಯ ಚಟುವಟಿಕೆಗಳೂ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ಸರ್ಕಾರದ ಮುಂದೆ ಈ ಯೋಜ ನೆಗಳ ಪ್ರಸ್ತಾವನೆ ಇಲ್ಲದಿರುವಾಗ ಹಾಗೂ ಯೋಜನೆಗೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳೂ ನಡೆಯದಿರುವಾಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅನಾ ವಶ್ಯಕವಾಗಿದೆ ಎಂದು ಅರ್ಜಿಯನ್ನು ವಜಾ ಮಾಡಿದ್ದಲ್ಲದೆ, ಮುಂದೆ ಏನಾದರೂ ಪರಿ ಸರಕ್ಕೆ ಹಾನಿಯಾಗುವಂತಹ ಇಂತಹ ಯೋಜನೆ ಅನುಷ್ಠಾನಕ್ಕೆ ಬರುವುದಾದರೆ ಆಗ ಅರ್ಜಿ ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ತಿಳಿಸಿದರು.