ತೀವ್ರ ಹಾನಿ ಪ್ರದೇಶಕ್ಕೆ ಪ್ರವಾಸಿಗರ ಭೇಟಿ, ಕ್ರಮಕ್ಕೆ ಸೂಚನೆ
ಕೊಡಗು

ತೀವ್ರ ಹಾನಿ ಪ್ರದೇಶಕ್ಕೆ ಪ್ರವಾಸಿಗರ ಭೇಟಿ, ಕ್ರಮಕ್ಕೆ ಸೂಚನೆ

August 27, 2018

ಮಡಿಕೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುತ್ತಿರುವ ಪ್ರವಾಹ, ಭೂ ಕುಸಿತ ಮತ್ತು ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾನಿಯಾಗಿದ್ದು, ಅಪಾಯದ ಮಟ್ಟದಲ್ಲಿರುವ ಹಿನ್ನಲೆಯಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲಿನ ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ ಗೃಹಗಳಲ್ಲಿ ಆಗಸ್ಟ್ 31 ರವರೆಗೆ ಪ್ರವಾಸಿಗರ ವಾಸ್ತವ್ಯ ವನ್ನು ರದ್ದುಪಡಿಸಲು ಈ ಹಿಂದೆ ಆದೇಶಿಸಲಾಗಿತ್ತು.

ಆದರೆ ಜಿಲ್ಲೆಯಲ್ಲಿನ ಕೆಲವು ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ ಗೃಹಗಳ ಮಾಲೀಕರು ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ವಾಸ್ತವ್ಯ ನೀಡುತ್ತಿರುವುದು ಹಾಗೂ ವಾಸ್ತವ್ಯ ಹೂಡಿರುವ ಪ್ರವಾಸಿಗರನ್ನು ಮಳೆಯಿಂದ ಹಾನಿ ಯಾಗಿರುವ ಪ್ರದೇಶಗಳಿಗೆ ಹಾಗೂ ಇತರೆ ಪ್ರವಾಸಿ ತಾಣಗಳಿಗೆ ಕರೆದೊಯ್ಯುತ್ತಿದ್ದು, ಪ್ರವಾಸಿಗರ ಸುರಕ್ಷತೆಯನ್ನು ನಿರ್ಲಕ್ಷಿಸಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.

ಜೊತೆಗೆ ಪ್ರವಾಸಿಗರು ತೀವ್ರ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದು ಪ್ರವಾಸಿಗರ ಜೀವ ಹಾನಿಗೆ ಕಾರಣವಾಗಬಹುದೆಂದು ಪರಿಗಣಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರ ವಾಸ್ತವ್ಯಕ್ಕೆ ಅನುವು ಮಾಡಿಕೊಡುತ್ತಿರುವ ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ ಗೃಹಗಳ ಹಾಗೂ ತೀವ್ರ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನಿರ್ದೇಶನ ನೀಡಿದ್ದಾರೆ.

Translate »