ಮೈಸೂರು: ಮೈಸೂರಿನಲ್ಲಿ ನಿರಂತರವಾಗಿ ಸುರಿ ಯುತ್ತಿರುವ ಮಳೆಯ ನಡುವೆ, ಈ ಹಿಂದೆ ತೇಪೆ ಹಾಕಿ ಮುಚ್ಚಿದ್ದ ಗುಂಡಿಗಳು ಬಾಯ್ತೆರೆದು, ವಾಹನ ಸಂಚಾರಕ್ಕೆ ಅಪಾಯ ಕಾರಿಯಾಗಿ ಪರಿಣಮಿಸುತ್ತಿವೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈಸೂರಿನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಗರಿಗೆದರಿತ್ತು. ಕೆಲ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಿದರೆ ಮತ್ತಷ್ಟು ರಸ್ತೆಗಳಲ್ಲಿ ಗುಂಡಿಗಳನ್ನು ಮಾತ್ರ ಮುಚ್ಚಿ ತೇಪೆ ಹಾಕಲಾಗಿತ್ತು. ಈ ರೀತಿಯ ತರಾ ತುರಿ ಕಾಮಗಾರಿಯೂ ಸಂಪೂರ್ಣ ವಾಗದ ಕಾರಣ ಹಲವಾರು ಗುಂಡಿಗಳಿಗೆ ಡಾಂಬರು ಬದಲಾಗಿ ಮಣ್ಣು ಮುಚ್ಚ ಲಾಗಿದೆ. ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯೊಂದಿಗೆ ಕಾಮ ಗಾರಿ ಗುಣಮಟ್ಟದ ಬಣ್ಣವೂ ಬಯಲಾಗು ತ್ತಿದೆ. ಅನೇಕ ರಸ್ತೆಗಳಲ್ಲಿ ಡಾಂಬರು ಕಿತ್ತು, ಮತ್ತೆ ಗುಂಡಿಗಳ ದರ್ಶನವಾಗುತ್ತಿವೆ. ಅಲ್ಲದೆ ಗುಂಡಿಗೆ ಮಣ್ಣು ತುಂಬಿದ್ದ ಕಡೆಗಳಲ್ಲಿ, ರಾಡಿಯಾಗಿ ವಾಹನ ಸಂಚಾರಕ್ಕೆ ಅಡ್ಡಿ ಯಾಗುತ್ತಿದೆ. ಇಂತಹ ಸ್ಥಳಗಳು ದ್ವಿಚಕ್ರ ವಾಹನ ಸವಾರರಿಗಂತೂ ಕಂಟಕಪ್ರಾಯ ವಾದಂತಿವೆ. ಮೈಸೂರು-ಗದ್ದುಗೆ ರಸ್ತೆಯ ಆಯುಷ್ ವೃತ್ತದಲ್ಲಿ ತಿಂಗಳ ಹಿಂದಷ್ಟೇ ರಸ್ತೆ ಗುಂಡಿಗಳನ್ನು ಡಾಂಬರಿನಿಂದ ಮುಚ್ಚ ಲಾಗಿತ್ತು. ಅದಾಗಲೇ ಗುಂಡಿಗಳಿಂದ ಡಾಂಬರು ಮೇಲೆದ್ದು ಹಿಂದಿನ ದುಸ್ಥಿತಿಯೇ ನಿರ್ಮಾಣವಾಗುತ್ತಿದೆ. ನಿರಂತರ ಮಳೆ ಹಾಗೂ ವಾಹನ ಸಂಚಾರದಿಂದ ಡಾಂಬರು ಕಿತ್ತು, ಜಲ್ಲಿ ಕಲ್ಲುಗಳೂ ಮೇಲೆದ್ದು, ದ್ವಿಚಕ್ರ ವಾಹನ ಸಂಚಾರಕ್ಕೆ ಅಪಾಯ ಕಾರಿಯಾಗುತ್ತಿವೆ. ನ್ಯೂ ಕಾಂತರಾಜ್ ಅರಸ್ ರಸ್ತೆ, ಮಂಡಿ ಮೊಹಲ್ಲಾದ ಸಾಡೆ ರಸ್ತೆ, ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆ ಸೇರಿದಂತೆ ದೇವರಾಜ ಮೊಹಲ್ಲಾ, ಶ್ರೀರಾಂ ಪುರ, ಕುವೆಂಪುನಗರ ಇನ್ನಿತರ ಬಡಾ ವಣೆಗಳ ಮುಖ್ಯರಸ್ತೆಗಳಲ್ಲಿ ಗುಂಡಿಗಳು ಬಾಯ್ತೆರೆಯುತ್ತಿವೆ. ರಸ್ತೆಯ ಅವ್ಯವಸ್ಥೆಯ ಜೊತೆಗೆ ಒಳಚರಂಡಿಗಳ ದುಸ್ಥಿತಿಯೂ ಅಲ್ಲಲ್ಲಿ ಅನಾವರಣವಾಗುತ್ತಿದೆ. ಬಿ.ಎಂ. ಶ್ರೀನಗರದಲ್ಲಿ ಆಗಾಗ್ಗೆ ಮ್ಯಾನ್ಹೋಲ್ ಗಳಿಂದ ಕೊಳಚೆ ನೀರು ಉಕ್ಕಿ ಬರುವುದ ರಿಂದ ನಿವಾಸಿಗಳು ಆತಂಕಗೊಂಡಿದ್ದಾರೆ. ಶೌಚಾಲಯಗಳ ಕಮೋರ್ಡ್ ಮೂಲಕ ಅನೇಕ ಮನೆಯೊಳಕ್ಕೆ ಕೊಳಚೆ ನೀರು ಹರಿಯುತ್ತಿದೆ. ಮಳೆ ಬಂದರೆ ಸಾಕು ಹೀಗೆ ಅನೇಕ ಬಡಾವಣೆಗಳಲ್ಲಿ ಒಳಚರಂಡಿ ಅವ್ಯವಸ್ಥೆಯ ದರ್ಶನವಾಗುತ್ತಿದೆ. ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡಬಹುದೆಂಬ ಆತಂಕ ದಲ್ಲಿ ಬದುಕುವಂತಾಗಿದೆ ಎಂದು ಸಾರ್ವ ಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಹಂದಿ ಕಾಟ: ಚಿಕ್ಕಹರದನಹಳ್ಳಿಯಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಈ ಸಮಸ್ಯೆ ಬಗ್ಗೆ ಸಾರ್ವಜನಿಕರು ಯಾರನ್ನು ಸಂಪ ರ್ಕಿಸಿ, ತಿಳಿಸಬೇಕೆಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಶ್ರೀರಾಂಪುರ ನಿವಾಸಿ ಸುದೀಂದ್ರ. ಈ ಸಮಸ್ಯೆಗಳ ಬಗ್ಗೆ ನಗರ ಪಾಲಿಕೆ ಕಂಟ್ರೋಲ್ ರೂಂ ದೂರವಾಣ ಸಂಖ್ಯೆಗೆ ಸಂಪರ್ಕಿಸಿದರೆ ಯಾವುದೇ ಪ್ರಯೋ ಜನವಾಗುತ್ತಿಲ್ಲ ಎಂದು ಸಾರ್ವಜನಿಕರು ಹತಾಷೆಯಿಂದ ತಿಳಿಸಿದ್ದಾರೆ.
ನಮ್ಮ ಸರ್ಕಾರವಿದ್ದಾಗ ಮೈಸೂರು ನಗರ ಅಭಿವೃದ್ಧಿಗೆ ಇಷ್ಟು ಕೋಟಿ ರೂ. ಹಣ ನೀಡಿದ್ದೆವು ಎಂದು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನ ನಾಯಕರು ಆಗಾಗ್ಗೆ ಹೇಳುತ್ತಿರುತ್ತಾರೆ. ಆದರೆ ನೂರಾರು ಕೋಡಿ ರೂ. ಹರಿದು ಬಂದರೂ ಕನಿಷ್ಟ ಮೂಲ ಸೌಲಭ್ಯವನ್ನೂ ಸಮರ್ಪಕವಾಗಿ ಕಲ್ಪಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಅನು ದಾನದ ಹಣ ಏನಾಯಿತು? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುವುದಂತೂ ಸತ್ಯ. ಒಂದೇ ಕಾಮಗಾರಿಗೆ 2 ಬಾರಿ ಬಿಲ್ ಮಾಡುವುದು. ಗುಣಮಟ್ಟವಿಲ್ಲದ ಕಾಮ ಗಾರಿಯನ್ನು ತರಾತುರಿಯಲ್ಲಿ ನಡೆಸಿ, ಸಾರ್ವಜನಿಕರ ಮೂಗಿಗೆ ತುಪ್ಪ ಸವರಿ, ಹಣ ಲಪಟಾಯಿಸುವುದು. ಈ ರೀತಿಯ ಅಕ್ರಮಗಳೇನಾದರೂ ನಡೆಯುತ್ತಿವೆಯೇ? ಎಂಬ ಚಿಂತನೆಯೂ ಜನರಲ್ಲಿದೆ. ವಿಧಾನಸಭಾ ಚುನಾವಣೆಯಂತೂ ಮುಗಿದಿದ್ದಾಯ್ತು. ಆದರೆ ಕೆಲವೇ ತಿಂಗಳಲ್ಲಿ ನಗರ ಪಾಲಿಕೆ ಚುನಾವಣೆ ಎದುರಾಗಲಿದೆ. ಈಗಲಾ ದರೂ ಪಾಲಿಕೆ ಸದಸ್ಯರು ಎಚ್ಚರಗೊಳ್ಳದೆ ನಿರ್ಲಕ್ಷ್ಯವಹಿಸಿದರೆ, ಅದು ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಲಿದೆ.