ದೇಶದ್ರೋಹ ಪ್ರಕರಣ: ಲಭ್ಯವಾಗದ ಸೂಕ್ತ ಸಾಕ್ಷ್ಯಾಧಾರ
ಕೊಡಗು

ದೇಶದ್ರೋಹ ಪ್ರಕರಣ: ಲಭ್ಯವಾಗದ ಸೂಕ್ತ ಸಾಕ್ಷ್ಯಾಧಾರ

March 2, 2019

ಸೋಮವಾರಪೇಟೆ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಫೆ.20ರಂದು ದಾಖ ಲಾಗಿದ್ದ ದೇಶ ದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹೀಗಾಗಿ ಆರೋಪಿಯನ್ನು ಬಂಧಿಸದೇ ಕೂಲಂಕುಷ ತನಿಖೆ ಮುಂದುವರಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ್ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಉಮೇಶ್ ಎಂಬುವರು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಆರೋಪಿ ಪುಲ್ವಾಮಾ ದುರಂತವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾನೆ ಎಂದು ತಿಳಿಸಲಾಗಿತ್ತು. ಈ ಕುರಿತು ಸೋಮವಾರಪೇಟೆ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು. ಆದರೆ ಆರೋಪಿ ಆ ದಿನದಂದು ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಮಾತ್ರವಲ್ಲದೇ ಪ್ರಕರಣ ನಡೆದು 5 ದಿನಗಳ ಬಳಿಕ ದೂರುದಾರರು ಪ್ರಕರಣ ದಾಖಲಿಸಿದ್ದಾರೆ. ಪಟಾಕಿ ಸಿಡಿಸಿದ ಪ್ರಕರಣ ನಡೆದ ಬಳಿಕ ಆರೋಪಿಸಲಾದ ವ್ಯಕ್ತಿ ಕುಶಾಲನಗರಕ್ಕೆ ತೆರಳಿದ್ದರು. ಆ ದಿನದಂದು ಆರೋಪಿಯ ಮನೆಗೆ ನೆಂಟರು ಬಂದಿದ್ದು, ಮನೆಯಲ್ಲಿದ್ದ ಮಕ್ಕಳು ಶಬ್ದ ಹೊರಡಿಸದ ಪಟಾಕಿ ಸಿಡಿಸಿರುವುದು ಕಂಡು ಬಂದಿದೆ. ಹೂಕುಂಡ ಪಟಾಕಿ, ಸುರುಸುರು ಬತ್ತಿಯಂತಹ ಪಟಾಕಿಗಳ ಅವಶೇಷಗಳು ತನಿಖೆಯ ವೇಳೆ ಸ್ಥಳದಲ್ಲಿ ಪತ್ತೆಯಾಗಿದೆ. ಮಾತ್ರವಲ್ಲದೇ, ಹೆಚ್ಚಿನ ತನಿಖೆ ನಡೆಸಿದ ಸಂದರ್ಭ ಸುತ್ತ ಮುತ್ತಲಿನ ನಿವಾಸಿಗಳು ಕೂಡ ಪಟಾಕಿಯ ಶಬ್ದ ಕೇಳಿ ಬಂದಿಲ್ಲ ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಸಂಭ್ರಮಕ್ಕಾಗಿ ಸಿಡಿಸಲಾದ ಪಟಾಕಿಗಳು ಅಲ್ಲ ಎಂಬುದು ಖಾತ್ರಿಯಾಗಿದೆ. ಈ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸದೇ ಕೂಲಂಕುಷ ತನಿಖೆಯನ್ನು ಮುಂದುವರಿಸ ಲಾಗಿದೆ. ಆದರೆ ತನಿಖೆಯ ಸಂದರ್ಭ ಉದ್ದೇಶ ಪೂರ್ವಕವಾಗಿ ದೂರು ದಾಖಲಿಸಿರು ವುದು ಕಂಡು ಬಂದರೆ ದೂರುದಾರರ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ ಎಂದೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ತಿಳಿಸಿದರು.

Translate »