ಮಹಿಳಾ ಅಧಿಕಾರಿ ಕೆ.ಸುಶೀಲಾ ವಿಷಾದ ಮುಕ್ತ ವಿವಿಯಲ್ಲಿ ಮಹಿಳಾ ದಿನಾಚರಣೆ
ಮೈಸೂರು,ಮಾ.9(ಎಂಟಿವೈ)- ಬಡ ಕುಟುಂಬಗಳಿಗಿಂತ ಶ್ರೀಮಂತ ಹಾಗೂ ಸುಶಿಕ್ಷಿತ ಕುಟುಂಬದಲ್ಲೇ ಮಹಿಳೆಯರ ಮೇಲೆ ಹೆಚ್ಚಾಗಿ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ ಎಂದು ಮೈಸೂರು ಜಿ.ಪಂನ ಯೋಜನಾ ನಿರ್ದೇಶಕಿ ಕೆ.ಸುಶೀಲಾ ವಿಷಾದಿಸಿದ್ದಾರೆ.
ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಮುಕ್ತ ವಿವಿಯ ಅಕ್ಕಮಹಾದೇವಿ ಪೀಠದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮುಕ್ತ ವಿವಿಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿ ಸುವ ಹಿರಿಯ ಸಿಬ್ಬಂದಿ ಲಲಿತಮ್ಮ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಹಿಳಾ ಸಮಾನತೆಯ ಬಗ್ಗೆ ಮಾತನಾಡುತ್ತೇವೆ. ಜನಸಂಖ್ಯೆ ದೃಷ್ಟಿಯಲ್ಲಿ ಮಹಿಳೆಯರು ಪುರುಷರಷ್ಟೇ ಸರಿಸಮಾನವಾಗಿ ಇದ್ದಾರೆ. ಈಗಾಗಲೇ ಮಹಿಳೆಯರಿಗೆ ಸಮಾನತೆ ಸಿಕ್ಕಂತಾಗಿದೆ. ಆದರೆ ಸರಿಸಮಾನ ಅವಕಾಶ ಸಿಕ್ಕಿಲ್ಲ. ಇದಕ್ಕೆ ಪುರುಷರು ಮಹಿಳೆಯರ ಪರ ಧ್ವ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ನೂರಾರು ಪ್ರಕರಣಗಳನ್ನು ನೋಡಿದ್ದೇನೆ. ಅವುಗಳಲ್ಲಿ ಬಡ, ಶ್ರೀಮಂತ ಹಾಗೂ ಸುಶಿಕ್ಷಿತ ಕುಟುಂಬಗಳ ಪ್ರಕರಣಗಳನ್ನು ಗಮನಿಸಿದ್ದೇನೆ. ಅದರಲ್ಲೂ ವಿಚಾರಣೆ ವೇಳೆ ಕಾಲಿಗೆ ಬಿದ್ದು, ಅತಿ ವಿನಯವಾಗಿ ಮಾತನಾಡುವ ನಾಟಕ ವಾಡಿ ನಾನೇನು ತಪ್ಪು ಮಾಡಿಲ್ಲ. ಎಲ್ಲಾ ಹೆಂಡತಿಯದ್ದೇ ತಪ್ಪೆಂದು ಹೇಳಿರುವ ಶ್ರೀಮಂತರನ್ನು ಕಂಡಿದ್ದೇನೆ. ತನ್ನಷ್ಟೇ ಸರಿಸಮಾನವಾಗಿ ದುಡಿದರೂ ಮನೆಯಲ್ಲಿ ನಿರಂತರ ಕಿರುಕುಳ ನೀಡಿ, ತಾನು ಮುಗ್ಧ ಎಂದು ನಂಬಿಸಲು ಪ್ರಯ ತ್ನಿಸಿದ್ದವರನ್ನು ನೋಡಿದ್ದೇನೆ. ಸಿಗರೇಟಿನಿಂದ ಸುಟ್ಟಿರುವ ಪ್ರಕರಣವನ್ನೂ ಕಂಡಿದ್ದೇನೆ. ಸಮಾಜದಲ್ಲಿ ಎಷ್ಟೇ ಬದಲಾವಣೆಗಳಾಗುತ್ತಿದ್ದರೂ ಉತ್ತಮ ಶಿಕ್ಷಣ ಪಡೆದವರ ಕುಟುಂಬಗಳಲ್ಲೇ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿರುವುದು ತಲೆ ತಗ್ಗಿಸುವ ಸಂಗತಿ ಎಂದರು.
ಮುಂದುವರೆದ ದೇಶÀ ಅಮೇರಿಕಾದಲ್ಲೇ ಗಾರ್ಮೆಂಟ್ಸ್ನ ಮಹಿಳಾ ಸಿಬ್ಬಂದಿ ಸಮಾನ ಕೆಲಸಕ್ಕೆ ಸಮಾನ ವೇತನ, 8 ಗಂಟೆ ಕೆಲಸದ ಸಮಯ ನಿಗದಿ ಹಾಗೂ ಮಹಿಳೆಯರಿಗೂ ಮತದಾನದ ಹಕ್ಕು ನೀಡುವಂತೆ ಒತ್ತಾಯಿಸಿ ಹೋರಾಟ ಮಾಡಿದರು. ವಿವಿಧ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಮಹಿಳೆಯರು ಒಗ್ಗೂಡಿ ಪರಿಣಾಮಕಾರಿಯಾದ ಹೋರಾಟ ಮಾಡಿದ್ದು ಒಂದು ಸಾಧನೆ. ಈ ಎಲ್ಲಾ ಬೆಳವಣಿಗೆಯನ್ನು ಅವಲೋಕಿಸಿದಾಗ ಮುಂದು ವರೆದ ರಾಷ್ಟ್ರಗಳಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವುದು ಸಾಬೀತಾಗಿದೆ. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಮಹಿಳೆಯರು ಪುಣ್ಯ ಮಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನದಿಂದಲೂ ಮಹಿಳೆಯ ರಿಗೆ ಮತದಾನದ ಹಕ್ಕು ಲಭಿಸಿದೆ. ಇದಕ್ಕಾಗಿ ಮಹಿಳೆಯರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕೃತಜ್ಞರಾಗಿರಬೇಕು ಎಂದರು.
ಶಿಕ್ಷಣವೊಂದೇ ಮಹಿಳೆಯರ ಬದುಕನ್ನು ಹಸನು ಮಾಡುತ್ತದೆ ಎಂಬುದನ್ನು ಅರಿತಿದ್ದ ಸಾವಿತ್ರಿಬಾಫುಲೆ, ಮಹಿಳೆಯರಿಗೆ ಶಿಕ್ಷಣ ನೀಡಲು ಶಾಲೆಯೊಂದನ್ನು ಆರಂಭಿಸಿದರು. ಇದರಿಂದ ಸಮಾಜದ ಕೆಂಗಣ್ಣಿಗೆ, ಅಪಮಾನಕ್ಕೂ ಗುರಿಯಾಗಿ ದ್ದರು. ಸಗಣಿ ನೀರನ್ನು ಎರಚಿ ಅಪಮಾನಿಸಿದ್ದರು. ಆದರೂ ಛಲ ಬಿಡದೆ ಮಹಿಳೆಯರೂ ಶಿಕ್ಷಣ ಪಡೆಯಬೇಕು ಎಂಬ ಯಶಸ್ವಿ ಹೋರಾಟ ಮಾಡಿ ಗಮನ ಸೆಳೆದರು. ಸಾವಿತ್ರಿ ಬಾಫುಲೆ ಅವರಂತೆ ಮಹಿಳೆಯರು ತಮಗಾದ ಅಪಮಾನ, ಅಪಹಾಸ್ಯ ವನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆಯತ್ತ ಗಮನ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದರು. ಮಹಿಳೆಯರ ರಕ್ಷಣೆಗಾಗಿ ಹಲವಾರು ಕಾನೂನುಗಳಿವೆ. ಅವುಗಳನ್ನು ಸಮರ್ಥವಾಗಿ ಜಾರಿಗೆ ತಂದರೆ ಅವರ ಮೇಲಿನ ದೌರ್ಜನ್ಯ ತಡೆಯ ಬಹುದು. ಹೊಸ ಕಾನೂನುಗಳ ಅವಶ್ಯಕತೆ ಇರುವುದೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯ ಕ್ರಮದಲ್ಲಿ ಸಾಹಿತಿ ಪ್ರೊ.ಮೊರಬದ ಮಲ್ಲಿಕಾರ್ಜುನ, ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವೆ ಡಾ.ಕವಿತಾ ರೈ ಅವರ `ವಚನ-ನಿರ್ವಚನ’ ವಚನಗಳ ವಿಮರ್ಶೆಗಳ ಆಯ್ದ ಸಂಕಲನ ಬಿಡುಗಡೆ ಮಾಡಲಾಯಿತು. ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಡೀನ್ ಡಾ.ತೇಜಸ್ವಿ ನವಿಲೂರು, ಅಕ್ಕಮಹಾದೇವಿ ಪೀಠದ ಸಂಚಾಲಕಿ ಡಾ.ಹೆಚ್.ರಾಜೇಶ್ವರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.