- ಜಿಲ್ಲಾ ಚುನಾವಣಾ ವೀಕ್ಷಕ ರಂಜಿತ್ ಕುಮಾರ್ರಿಂದ ಚೆಕ್ಪೋಸ್ಟ್ ತಪಾಸಣೆ
- ಇಒ, ತಹಸಿಲ್ದಾರ್ಗಳಿಂದ ಮತದಾರರಿಗೆ ಅರಿವು-ಮತದಾನಕ್ಕೆ ಪ್ರೋತ್ಸಾಹ
ಮಂಡ್ಯ: ಜೆಡಿಎಸ್ ಅಭ್ಯರ್ಥಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕೆ. ಹಾಗೂ ಬಿಜೆಪಿ ಮತ್ತು ರೈತ ಸಂಘ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನಡುವಿನ ನೇರ ಹಣಾಹಣಿ, ತೀವ್ರ ಪೈಪೋಟಿಯ ಕಾರಣದಿಂದಾಗಿಯೇ ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯ, ದೇಶದ ಮಾಧ್ಯಮಗಳ ಗಮನ ಸೆಳೆದಿದೆ. ಇದರೊಟ್ಟಿಗೆ ಸ್ಟಾರ್ ನಟರ ಪ್ರಚಾರವೂ ಸೇರಿಕೊಂಡಿರುವುದರಿಂದ ಎಲ್ಲರ ಗಮನ ಸಕ್ಕರೆ ನಾಡಿನ ಲೋಕಸಭಾ ಚುನಾವಣೆಯತ್ತಲೇ ಕೇಂದ್ರೀಕೃತ ವಾಗಿದೆ. ಪರಿಣಾಮ ರಾಜಕೀಯ ಆಸಕ್ತಿ ಇದ್ದವರಷ್ಟೇ ಅಲ್ಲ, ಬೇರೆಯವರೂ ಮಂಡ್ಯದಲ್ಲಿ ಇವತ್ತು ಏನಾಯಿತು ಎಂದು ಕುತೂಹಲದಿಂದ ಪ್ರಶ್ನೆ ಮಾಡುತ್ತಿದ್ದಾರೆ.
ಇದೆಲ್ಲದರ ಮಧ್ಯೆ ಗುತ್ತಿಗೆದಾರರು, ಕೋಳಿ ಮಾರಾಟಗಾರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆದಾಯ ತೆರಿಗೆ ದಾಳಿ, ಚೆಕ್ ಪೋಸ್ಟ್ಗಳಲ್ಲಿ ಅಕ್ರಮ ಹಣ, ಮದ್ಯ ಸಾಗಣೆ ತಡೆವ ಯತ್ನವಾಗಿ ತಪಾಸಣೆಯೂ ಮುಂದುವರಿದಿದೆ. ಇನ್ನೊಂದೆಡೆ ಚುನಾ ವಣಾ ಅಧಿಕಾರಿಗಳು ಮಾತ್ರ ತಣ್ಣಗೆ ತಮ್ಮಷ್ಟಕ್ಕೇ ಮತದಾನ ಜಾಗೃತಿಗೆ ಕಾರ್ಯಕ್ರಮ ಗಳನ್ನೂ ಹಮ್ಮಿಕೊಳ್ಳುತ್ತಿದ್ದಾರೆ.
ಚೆಕ್ಪೋಸ್ಟ್ ಪರಿಶೀಲನೆ: ಮಂಡ್ಯ ಲೋಕಸಭಾ ಚುನಾವಣಾ ಜಿಲ್ಲಾ ವೀಕ್ಷಕÀ ರಂಜಿತ್ ಕುಮಾರ್ ಅವರು ಜಿಲ್ಲೆಯ ವಿವಿಧೆಡೆ ಚುನಾವಣಾ ತಪಾಸಣೆಯ ಚೆಕ್ಪೋಸ್ಟ್ ಗಳನ್ನು ಪರಿಶೀಲಿಸಿದರು. ನಾಗಮಂಗಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೋಂದಿಹಳ್ಳಿ, ಚುಂಚನಹಳ್ಳಿ ಹಾಗೂ ಕದಬಹಳ್ಳಿ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ವಾಹನ ತಪಾಸಣಾ ಪ್ರಕ್ರಿಯೆಯನ್ನು ವೀಕ್ಷಿಸಿದರು. ವಿವಿಧ ಪ್ರದೇಶಗಳಲ್ಲಿನ ನಿಯೋಜಿತ ಮತ ಕೇಂದ್ರಗಳಿಗೂ ಭೇಟಿ ನೀಡಿ ಚುನಾವಣಾ ಸಿದ್ಧತೆ ಪರಿಶೀಲಿಸಿದರು.
ಧೈರ್ಯ ತುಂಬುವ ಯತ್ನ: ನಾಗಮಂಗಲ ವಿಧಾನಸಭಾ (ಸಂಖ್ಯೆ 191) ಕ್ಷೇತ್ರ ವ್ಯಾಪ್ತಿ ಯಲ್ಲಿ ಪ್ರವಾಸ ಕೈಗೊಂಡ ರಂಜಿತ್ ಕುಮಾರ್ ಸೂಕ್ಷ್ಮ ಮತಗಟ್ಟೆಗಳ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಜನರಿಗೆ ನೈತಿಕ ಸ್ಥೈರ್ಯ ತುಂಬಲು ಯತ್ನಿಸಿದರು. ಯಾವುದಕ್ಕೂ ಭಯ ಬೀಳದೆ ತಪ್ಪದೇ ಮತದಾನ ಮಾಡಿರಿ. ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಭೀತಿಯಿಂದ ಪಾಲ್ಗೊಳ್ಳಿ ಎಂದು ಜಾಗೃತಿ ಮೂಡಿಸಿದರು.