ರೆಡ್ಡಿ ಶರಣಾಗತಿ?
ಮೈಸೂರು

ರೆಡ್ಡಿ ಶರಣಾಗತಿ?

November 10, 2018

ಬೆಂಗಳೂರು:  ಆಂಬಿಡೆಂಟ್ ವಂಚನೆ ಪ್ರಕರಣದ ಆರೋಪಿ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಯಾವುದೇ ಕ್ಷಣದಲ್ಲಿ ಶರಣಾಗತಿಯಾಗುವ ಸಾಧ್ಯತೆ ಇದೆ. ಬಿಜೆಪಿಯ ಹಿರಿಯ ನಾಯಕರೊಬ್ಬರು ಇಂದು ತನಿಖಾಧಿಕಾರಿಯನ್ನು ಸಂಪರ್ಕಿಸಿ, ರೆಡ್ಡಿ ಅವರನ್ನು ಶರಣಾಗತಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಅನಗತ್ಯವಾಗಿ ಅವರ ಕುಟುಂ ಬದವರಿಗೆ ತೊಂದರೆ ನೀಡಬೇಡಿ, ರೆಡ್ಡಿ ಎಲ್ಲಿದ್ದಾರೆ ಎಂಬುದನ್ನು ಹುಡುಕಿ, ಕರೆ ತರುವುದಾಗಿಯೂ ಕೋರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮಧ್ಯೆ ಜನಾರ್ದನ ರೆಡ್ಡಿ ಪರ ವಕೀಲ ಚಂದ್ರಶೇಖರ್ ಅವರು ಹೈಕೋರ್ಟ್‍ನಲ್ಲಿ 2 ರಿಟ್ ಅರ್ಜಿ ಸಲ್ಲಿಸಿ, ಎಫ್‍ಐಆರ್ ರದ್ದು ಹಾಗೂ ತನಿಖಾಧಿ ಕಾರಿ ಬದಲಾವಣೆ ಕೋರಿದ್ದಾರೆ.

ಡಿಸಿಪಿ ಗಿರೀಶ್ ಮತ್ತು ತನಿಖಾಧಿ ಕಾರಿ ಎಸಿಪಿ ವೆಂಕಟೇಶ್ ಪ್ರಸನ್ನ ಅವ ರನ್ನು ಬದಲಾಯಿಸಬೇಕು. ಈ ಇಬ್ಬರು ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿಲ್ಲ. ಪ್ರಕರಣದ ನಾಲ್ಕನೇ ಆರೋ ಪಿಗೆ ಥಳಿಸಿ ರೆಡ್ಡಿ ಹೆಸರು ಹೇಳುವಂತೆ ಒತ್ತಡ ಹೇರಿದ್ದಾರೆ. ರಾಜಕೀಯ ಒತ್ತಡಗಳಿಗೆ ಪೂರಕವಾಗಿ ತನಿಖೆ ಮಾಡುತ್ತಿ ದ್ದಾರೆ ಎಂದು ವಕೀಲರು ಆರೋಪಿಸಿ ದ್ದಾರೆ. ಪ್ರಮುಖ ಆರೋಪಿ ಫರೀದ್‍ಗೆ ಬೇಲ್ ಸಿಕ್ಕರೂ, ಪೊಲೀಸರು ವಶಕ್ಕೆ ಪಡೆ ದಿದ್ದಾರೆ. ಪ್ರಕರಣದ ಪ್ರಮುಖ ಅಂಶವನ್ನು ಬಿಟ್ಟು ಪೂರ್ವಗ್ರಹ ಪೀಡಿತರಾಗಿ ತನಿಖೆ ಮಾಡುತ್ತಿದ್ದಾರೆ. ತನಿಖೆಯ ಅಂಶಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿದ್ದಾರೆ. ನಮ್ಮ ಕಕ್ಷಿದಾರರ ವಿರುದ್ಧ ಯಾವುದೇ ದೂರು ಇಲ್ಲ. ಅಲ್ಲದೇ ನಮ್ಮ ಕಕ್ಷಿದಾರರ ವಿರುದ್ಧ ಯಾವುದೇ ವ್ಯಕ್ತಿ ಆರೋಪ ಸಹ ಮಾಡಿಲ್ಲ. ರೆಡ್ಡಿ ಆಂಬಿಡೆಂಟ್ ಕಂಪನಿಯ ಪಾಲುದಾರರೂ ಅಲ್ಲ. ತನಿಖಾಧಿಕಾರಿ ಬೇರೆ ಉದ್ದೇಶದಿಂದ ರೆಡ್ಡಿಯವರನ್ನು ಇಲ್ಲಿ ಸಿಕ್ಕಿಸಲು ಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಒತ್ತಡಕ್ಕೆ ಬಿದ್ದು ಈ ರೀತಿ ರೆಡ್ಡಿಯವರನ್ನು ಟಾರ್ಗೇಟ್ ಮಾಡಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ಬರೆಯಲಾಗಿದೆ.

ಆದರೆ ಜನಾರ್ದನ ರೆಡ್ಡಿ ಮಾತ್ರ ಎಲ್ಲಿದ್ದಾರೆ ಎಂಬ ಸಣ್ಣ ಸುಳಿವು ಸಿಸಿಬಿ ಅಧಿಕಾರಿಗಳಿಗೆ ಕೂಡ ಸಿಕ್ಕಿಲ್ಲ. ಅಜ್ಞಾತ ಸ್ಥಳದಲ್ಲಿರುವ ರೆಡ್ಡಿ ಅವರನ್ನು ಹುಡುಕಲು ಹೈದರಾಬಾದ್‍ನಲ್ಲಿ ಕಾರ್ಯಾಚರಣೆ ಆರಂಭ ವಾಗಿದ್ದು, ಸಿಸಿಬಿ ತಂಡಕ್ಕೆ ಹೈದರಾಬಾದ್ ಪೊಲೀಸರು ಸಾಥ್ ನೀಡಿದ್ದಾರೆ.

ಒಟ್ಟು 15 ಜನರ ಮೊಬೈಲ್ ನಂಬರ್ ಮೇಲೆ ಸಿಸಿಬಿ ಕಣ್ಣಿಟ್ಟಿದ್ದು, ಅವರ ಜೊತೆ ಸಂಪ ರ್ಕಕ್ಕೆ ಬರಬಹುದೆಂಬ ಶಂಕೆಯಲ್ಲಿ ತಂಡ ಕಾರ್ಯಪ್ರವೃತ್ತವಾಗಿದೆ. ಮತ್ತೊಂದೆಡೆ ರೆಡ್ಡಿ ಆಪ್ತ ಆಲಿಖಾನ್ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರೂ, ಸಿಸಿಬಿ ವಿಚಾರಣೆಗೆ ಹಾಜರಾಗಿಲ್ಲ. ಆಲಿಖಾನ್‍ಗೆ ಸಿಸಿಬಿ ನೋಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಆಂಬಿಡೆಂಟ್ ಪ್ರಕರಣದಲ್ಲಿ ಸಿಲುಕಿರುವ ಗಾಲಿ ಜನಾರ್ಧನ ರೆಡ್ಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನ. 12ಕ್ಕೆ ಮುಂದೂಡಿಕೆ ಯಾಗಿದೆ. ಬಂಧನ ಭೀತಿ ಎದುರಿಸುತ್ತಿರುವ ಜನಾರ್ಧನ ರೆಡ್ಡಿ ಕೆಲ ದಿನಗಳಿಂದ ತಲೆ ಮರೆಸಿಕೊಂಡಿದ್ದು, ಅವರ ಬೆಂಗಳೂರು, ಬಳ್ಳಾರಿ ನಿವಾಸದ ಮೇಲೆ ಸಿಸಿಬಿ ಪೆÇಲೀ ಸರು ದಾಳಿ ನಡೆಸಿದ್ದಾರೆ. ಶುಕ್ರವಾರ ಬೆಂಗಳೂರು 61ನೇ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ರೆಡ್ಡಿ ಪರ ವಕೀಲರಾದ ಸಿ.ಎಚ್.ಹನುಮಂತರಾಯ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆ ಯನ್ನು ಮುಂದೂಡಿ, ಸಿಸಿಬಿಗೆ ಆಕ್ಷೇಪಣೆ ಸಲ್ಲಿಕೆಗೆ ಸಹ ಅನುಮತಿ ನೀಡಿದೆ. ಇದರ ನಡುವೆ ಭಾನುವಾರ (ನ.11) ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ರೆಡ್ಡಿಗೆ ನೋಟೀಸ್ ಜಾರಿ ಮಾಡಿದೆ ಎನ್ನಲಾಗಿದೆ. ಈ ಕುರಿತಂತೆ ಪ್ರಶ್ನಿಸಿದ ನ್ಯಾಯಾಧೀಶರು ಸಿಸಿಬಿ ವಿಚಾರಣೆಗೆ ರೆಡ್ಡಿ ಗೈರಾದದ್ದೇಕೆ ಎಂದು ಕೇಳಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ವಕೀಲರು, ರೆಡ್ಡಿ ಅವರಿಗೆ ಬಂಧನ ಭೀತಿ ಇದೆ. ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕರೆ ಭಾನುವಾರವೇ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದರು.

ಬಂಧನಕ್ಕೆ ಕಾರಣ ಕಾಣುತ್ತಿಲ್ಲ: ಆದರೆ ಜನಾರ್ಧನ ರೆಡ್ಡಿಯನ್ನು ಬಂಧಿಸಲು ತಕ್ಕ ಕಾರಣಗಳಾವುದೂ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಹೀಗಾಗಿ ಅವರು ಬಂಧನ ಭೀತಿಗೊಳಗಾಗಬೇಕಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇದೇ ವೇಳೆ ರೆಡ್ಡಿ ಪರ ವಕೀಲರು ತಾವು ಈ ಹಿಂದೆ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ತಾವೇ ಹಿಂಪಡೆದಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಾತ್ರ ಮುಂದುವರಿಸಿದ್ದಾರೆ.

Translate »