ಚಲಿಸುತ್ತಿದ್ದ ಬೈಕ್‍ನಿಂದ ಬಿದ್ದು ಯುವತಿ ಸಾವು
ಕೊಡಗು

ಚಲಿಸುತ್ತಿದ್ದ ಬೈಕ್‍ನಿಂದ ಬಿದ್ದು ಯುವತಿ ಸಾವು

August 3, 2018

ಮಡಿಕೇರಿ:  ಅತೀ ವೇಗದಲ್ಲಿ ಚಲಿಸು ತ್ತಿದ್ದ ಬೈಕ್‍ನಿಂದ ಬಿದ್ದು ಯುವತಿಯೋರ್ವಳು ಮೃತಪಟ್ಟ ಘಟನೆ ನಗರದ ಹೊರವಲಯದ ಅಬ್ಭಿಫಾಲ್ಸ್ ರಸ್ತೆಯಲ್ಲಿ ಸಂಭವಿಸಿದೆ. ಕುಶಾಲನಗರದ ಹಾರಂಗಿ ಹೇರೂರು ಗ್ರಾಮದ ನಿವಾಸಿ ಭವ್ಯ(26) ಎಂಬಾಕೆಯೇ ಮೃತಪಟ್ಟ ದುರ್ದೈವಿ.

ಘಟನೆ ವಿವರ: ಸೋ.ಪೇಟೆ ತಾಲೂಕು ಬಜೆಗುಂಡಿ ನಿವಾಸಿ ನವೀನ್ ಕುಮಾರ್ ತನ್ನ ಸ್ನೇಹಿತ ಮೋಹನ್ ಅವರೊಂದಿಗೆ ಆರ್‌ಟಿಓ ಕಚೇರಿಗೆ ಆಗಮಿಸಿ ತನ್ನ ವಾಹನ ಚಾಲನಾ ಪರವಾನಗಿ ನವೀಕರಣ ಮಾಡಿಸಿಕೊಂಡು ಮಡಿಕೇರಿಗೆ ಬಂದಿದ್ದರು. ಈ ಸಂದರ್ಭ ಭವ್ಯ ತನ್ನ ಪರಿಚಿತನಾದ ನವೀನ್ ಕುಮಾರ್ ನೊಂದಿಗೆ ಅಬ್ಬಿಫಾಲ್ಸ್ ನೋಡಲು ಅಪಾಚಿ ಬೈಕ್(ಕೆ.ಎ.12-ಆರ್.2092) ನಲ್ಲಿ ತೆರಳಿದ್ದಾರೆ. ಮೋಹನ್ ಕೂಡ ಬೇರೊಂದು ಬೈಕ್‍ನಲ್ಲಿ ಇವರನ್ನು ಹಿಂಬಾಲಿಸಿದ್ದಾನೆ. ಆರ್‌ಟಿಓ ಕಚೇರಿಯ ಮುಂದಿನ ಅಬ್ಬಿಫಾಲ್ಸ್ ರಸ್ತೆಯ ತಿರುವಿನಲ್ಲಿ ನವೀನ್‍ಕುಮಾರ್ ಚಾಲಿಸುತ್ತಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿ ಬಿದ್ದಿದೆ.

ಈ ಸಂದರ್ಭ ಬೈಕ್ ಹಿಂಬದಿಯಲ್ಲಿ ಕುಳಿತ್ತಿದ್ದ ಭವ್ಯ ರಸ್ತೆಗೆ ಬಿದ್ದಿದ್ದು ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ನವೀನ್ ಕುಮಾರ್‍ಗೆ ತರಚು ಗಾಯಗಳಾಗಿದ್ದು, ಮತ್ತೊಂದು ಬೈಕ್‍ನಲ್ಲಿ ಬರುತ್ತಿದ್ದ ಮೋಹನ್ ಕೂಡ ತಿರುವು ರಸ್ತೆಯಲ್ಲಿ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಗ್ರಾಮಾಂತರ ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದು, ಭವ್ಯಾಳ ಮೃತದೇಹವನ್ನು ಮಡಿಕೇರಿ ಜಿಲ್ಲಾ ಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿದ್ದಾರೆ.

ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಮಡಿಕೇರಿ-ಕುಶಾಲನಗರ ರಸ್ತೆಯ ಬಾಳೆಕಾಡು ಎಸ್ಟೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸುಂಟಿಕೊಪ್ಪ ಕಡೆಯಿಂದ ಬರುತ್ತಿದ್ದ ಬೈಕ್‍ಗೆ, ಮಡಿಕೇರಿಯಿಂದ ಸುಂಟಿಕೊಪ್ಪ ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿ ಬರುತ್ತಿದ್ದ ಗಣಿ ಮತ್ತು ಪ್ರಣೀತ ಎಂಬ ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ.

ಸುಂಟಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ತುರ್ತು ವಾಹನದಲ್ಲಿ ಗಾಯಾಳು ಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣದ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಕ್ಕಂದೂರು ಬಳಿ ಕಾರು ಮತ್ತು ಆಟೋ ರಿಕ್ಷಾದ ನಡುವೆ ಡಿಕ್ಕಿ ಸಂಭವಿಸಿದ್ದು, ಆಟೋ ದಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಡೆದಿದೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆ ಯಲ್ಲಿ ದೂರು ದಾಖಲಾಗಿದೆ.

Translate »