ದಿಢೀರ್ ದೇವರಾಜ ಮಾರುಕಟ್ಟೆಗೆ ಬಂದ ಯದುವೀರ್ ದಂಪತಿ
ಮೈಸೂರು

ದಿಢೀರ್ ದೇವರಾಜ ಮಾರುಕಟ್ಟೆಗೆ ಬಂದ ಯದುವೀರ್ ದಂಪತಿ

June 17, 2019

ಮೈಸೂರು: ಮೈಸೂರಿನ ದೇವ ರಾಜ ಮಾರುಕಟ್ಟೆಗೆ ಭಾನುವಾರ ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ದಂಪತಿ ಅನಿರೀಕ್ಷಿತವಾಗಿ ಭೇಟಿ ನೀಡಿ, ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಅಚ್ಚರಿಯನ್ನುಂಟು ಮಾಡಿದರು.

ಇಂದು ಬೆಳಿಗ್ಗೆ ಪತ್ನಿಯೊಂದಿಗೆ ಯದುವೀರ್, ಯಾವ ಮುನ್ಸೂಚನೆಯೂ ಇಲ್ಲದೆ ಭದ್ರತಾ ಸಿಬ್ಬಂದಿಯೂ ಇಲ್ಲದೆ ಮಾರುಕಟ್ಟೆಗೆ ಭೇಟಿ ನೀಡಿ, ಮಳಿಗೆ ಗಳನ್ನು ವೀಕ್ಷಿಸಿದರು.

ಇದೇ ವೇಳೆ ತ್ರಿಷಿಕಾ ಕುಮಾರಿ ಅವರು ಮಾರುಕಟ್ಟೆಯಲ್ಲಿ ತಾಜಾ ಸೊಪ್ಪು, ತರಕಾರಿ ಖರೀದಿಸಿದರು. ಈ ವೇಳೆ ವ್ಯಾಪಾರಿಗಳು ಹಣ ಪಡೆ ಯಲು ನಿರಾಕರಿಸಿದರಾದರೂ, ಯದು ವೀರ್ ದಂಪತಿ ಬಲವಂತವಾಗಿಯೇ ಹಣ ನೀಡಿದರು. ಬಳಿಕ ಹಣ್ಣು, ಹೂವು ಮಾರಾಟ ಮಳಿಗೆಗಳಿರುವ ಯಾರ್ಡ್ ನಲ್ಲಿ ಒಂದು ಸುತ್ತು ಹಾಕಿದರು.

ಈ ವೇಳೆ ವ್ಯಾಪಾರಿಗಳು ಎದ್ದು ನಿಂತು, ಕೈ ಮುಗಿದು ಗೌರವ ಸೂಚಿಸಿದರು. ನಂತರ ಚಿಕ್ಕ ಗಡಿಯಾರದ ಬಳಿ ಇರುವ ಗುರು ಸ್ವೀಟ್ಸ್ ಮಳಿಗೆಗೆ ಬಂದು `ಮೈಸೂರು ಪಾಕ್’ ಖರೀದಿಸಿ ಅರಮನೆಯತ್ತ ಪ್ರಯಾಣ ಬೆಳೆಸಿದರು.

ವ್ಯಾಪಾರಿಗಳು ಫುಲ್ ಖುಷ್: ದೇವ ರಾಜ ಮಾರುಕಟ್ಟೆಗೆ ಯದುವೀರ್ ದಂಪತಿ ಬಂದಿದ್ದನ್ನು ಕಂಡು ವ್ಯಾಪಾರಿಗಳು ಸಂತೋಷಪಟ್ಟರು. ಅದರಲ್ಲಿಯೂ ಬಾಳೆಹಣ್ಣು ವ್ಯಾಪಾರ ಮಳಿಗೆಯಲ್ಲಿ ಸಾಮಾನ್ಯರಂತೆ ಕುರ್ಚಿಯಲ್ಲಿ ಕುಳಿತು ಕೆಲಕಾಲ ವ್ಯಾಪಾರಿಗಳೊಂದಿಗೆ ಮಾತನಾಡಿದರು. ಅಲ್ಲಿ ನಂಜನಗೂಡು ರಸಬಾಳೆ ಖರೀದಿಸಿದರು. ಮಾರುಕಟ್ಟೆ ಯಲ್ಲಿನ ವ್ಯಾಪಾರಿಗಳು ಯದುವೀರ್ ದಂಪತಿ ಅನಿರೀಕ್ಷಿತ ಭೇಟಿಯಿಂದ ಸಂಭ್ರಮಿಸಿದರು.

 

Translate »