ಗೊಂದಲದ ಗೂಡಾದ ಜೆಡಿಎಸ್ ಸಭೆ
ಕೊಡಗು

ಗೊಂದಲದ ಗೂಡಾದ ಜೆಡಿಎಸ್ ಸಭೆ

July 24, 2018

ಗೋಣಿಕೊಪ್ಪಲು:  ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯು ವಿರಾಜಪೇಟೆಯ ಪುರಭವನದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಮೇರಿಯಂಡ ಸಂಕೇತ್ ಪೂವಯ್ಯನವರ ರಾಜಿನಾಮೆ ವಿಷಯ ದಲ್ಲಿ ಚರ್ಚೆಗಳು ನಡೆದವು. ಈ ಸಂದರ್ಭ ಸಂಕೇತ್‍ಪೂವಯ್ಯನವರ ವಿರೋಧದ ಗುಂಪಿನ ಪ್ರಮುಖರಾದ ಕಾನೂರಿನ ಪಕ್ಷದ ಮುಖಂಡರಾದ ಸುರೇಶ್‍ರವರು ಸಂಕೇತ್ ಪೂವಯ್ಯನವರ ರಾಜೀನಾಮೆಯು ಅಂಗೀಕಾರವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯದಲ್ಲೇ ವೀಕ್ಷಕರ ತಂಡ ಕೊಡಗಿಗೆ ಆಗಮಿಸಿ ನೂತನ ಅಧ್ಯಕ್ಷರ ನೇಮಕಾತಿ ಬಗ್ಗೆ ಚರ್ಚೆ ನಡೆಸಲಿದೆ ಎಂದು ಮಾಹಿತಿ ಒದಗಿಸುತ್ತಿದ್ದಂತೆಯೇ ಸಭೆಯು ಗೊಂದಲದಲ್ಲಿ ಮುಳುಗಿತು. ಗೊಂದಲದ ನಡುವೆ ತನ್ನ ಮಾತನ್ನು ಮುಂದುವರಿಸಿದ ಸುರೇಶ್‍ರವರು ಪಕ್ಷ ಸಂಘಟನೆಯಲ್ಲಿ ಸಂಕೇತ್ ವಿಫಲರಾಗಿದ್ದಾರೆ. ಕ್ಷೇತ್ರದ ಬದಲು ಸೋಮವಾರಪೇಟೆ ಭಾಗದಲ್ಲಿ ಜೀವಿ ಜಯನ ಪರ ಹೆಚ್ಚಾಗಿ ಕೆಲಸ ಮಾಡಿದ್ದರಿಂದ ಈ ಕ್ಷೇತ್ರದಲ್ಲಿ ಸಂಘಟನೆ ಕಟ್ಟಲು ವಿಫಲರಾಗಿದ್ದಾರೆ. ಪಕ್ಷ ಯಾರ ಆಸ್ತಿಯು ಅಲ್ಲ. ರಾಜ್ಯದಲ್ಲಿ ಸರ್ಕಾರ ಇರುವುದರಿಂದ ಕಾರ್ಯ ಕರ್ತರ ಕಷ್ಟಸುಖಗಳಿಗೆ ಮುಖಂಡರು ಸ್ಪಂದಿಸಬೇಕು ಎಂದರು.

ಪಕ್ಷದ ಮತ್ತೊಬ್ಬ ಪ್ರಮುಖರಾದ ಕಾರ್ಯಪ್ಪನವರು ಮಾತನಾಡಿ, ಕ್ಷೇತ್ರದಲ್ಲಿ ಯಾರನ್ನೂ ವಿಶ್ವಾಸಕ್ಕೆ ಪಡೆಯದ ಹಿನ್ನಲೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಮುಂದೆ ಪಕ್ಷ ಗಟ್ಟಿಯಾಗಲು ಹೊಸ ಅಧ್ಯಕ್ಷರ ನೇಮಕಾತಿ ನಡೆಯಬೇಕು. ರಾಜೀನಾಮೆ ನೀಡಿದವರನ್ನು ಮತ್ತೆ ಒತ್ತಾಯಿಸ ಬೇಡಿ ಎಂದು ಕರೆ ನೀಡಿದರು. ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಸಭೆಯಲ್ಲಿ ಮಾತನಾಡು ತ್ತದ್ದ ಕಾರ್ಮಾಡು ಸುಬ್ಬಣ್ಣ ಸೇರಿದಂತೆ ಇನ್ನಿತರ ಮುಖಂಡರ ಮಾತುಗಳು ಕೇಳಿಸಲಾರದ ಪರಿಸ್ಥಿತಿ ನಿರ್ಮಾಣವಾಯಿತು. ಅಂತಿಮವಾಗಿ ಯಾವುದೇ ನಿರ್ಣಯಗಳು ಕೈಗೊಳ್ಳದೆ ಸಭೆಯಿಂದ ಒಬ್ಬೊಬ್ಬರಾಗಿಯೇ ನಿರ್ಗಮಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ, ವಿರಾಜಪೇಟೆಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎಸ್.ಹೆಚ್ ಮತೀನ್ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲವೆಂದು ಮಾಧ್ಯಮಕ್ಕೆ ಪ್ರತಿ ಕ್ರಿಯೆ ನೀಡಿದರು. ಪಕ್ಷದ ಮುಖಂಡರಾದ ಪಿ.ಎ ಮಂಜುನಾಥ್, ಅಮ್ಮಂಡ ವಿವೇಕ್, ಅಜ್ಜಮಾಡ ಮುತ್ತಮ್ಮ, ಅಮ್ಮತ್ತಿ ಜಯಮ್ಮ, ಶಂಕ್ರು ನಾಚಪ್ಪ, ಸಣ್ಣುವಂಡ ಶ್ರೀನಿವಾಸ್, ಮನೆಯಪಂಡ ಬೆಳ್ಳಿಯಪ್ಪ ಮುಂತಾದವರು ಹಾಜರಿದ್ದರು.

ಸಂಕೇತ್ ಮನೆಗೆ ದೌಡಾಯಿಸಿದ ಮುಖಂಡರು.!

ಸಭೆಯನ್ನು ಮುಗಿಸಿದ ತರುವಾಯ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಒಗ್ಗಟ್ಟಾಗಿ ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯನವರ ನಿವಾಸಕ್ಕೆ ತೆರಳಿ ರಾಜಕೀಯ ಬೆಳವಣಿಗೆ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿದರು.

ರಾಜೀನಾಮೆ ವಿಚಾರದಲ್ಲಿ ಕಾರ್ಯ ಕರ್ತರಿಗೆ ಹಾಗೂ ಮುಖಂಡರಿಗೆ ವಿಷಯ ತಿಳಿಸದೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಂತರ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಿ ಯಾವುದೇ ಕಾರಣಕ್ಕೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸಿದಂತೆ ಪಕ್ಷದ ವರಿಷ್ಠರಿಗೆ ಖುದ್ದು ಭೇಟಿ ನೀಡಿ ಇಲ್ಲಿಯ ನೈಜ ಪರಿಸ್ಥಿತಿಯನ್ನು ಕುಮಾರಸ್ವಾಮಿ ಹಾಗೂ ದೇವಗೌಡವರಿಗೆ ಮನವರಿಕೆ ಮಾಡಿಕೊಡುವುದಾಗಿ ಮುಖಂಡರು ತಿಳಿಸಿದರು.

ಮುಖಂಡರು ಸಂಕೇತ್‍ರವರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುವಂತೆ ಕೇಳಿಕೊಂಡರು. ಈ ಸಂದರ್ಭ ಮನಸಿಗೆ ನೋವಾಗಿ ರಾಜೀನಾಮೆ ತೀರ್ಮಾನ ಮಾಡಿದ್ದೆ ಎಲ್ಲರಿಗೂ ತಿಳಿದಿರುವಂತೆ ಜಿಲ್ಲೆಯ ಉದ್ದಗಲಕ್ಕೂ ಸಂಚರಿಸಿ ಪಕ್ಷ ಕಟ್ಟಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಇದರಲ್ಲಿ ನನಗೆ ಆತ್ಮತೃಪ್ತಿ ಇದೆ ಪಕ್ಷ ಯಾವುದೇ ಜವಾಬ್ದಾರಿ ನೀಡಿದರು ಅದನ್ನು ನಡೆಸಿಕೊಂಡು ಹೋಗುತ್ತೇನೆ ಆತುರದಲ್ಲಿ ಕೈ ಗೊಂಡ ತೀರ್ಮಾನಕ್ಕೆ ಮನ್ನಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಪಕ್ಷದ ಮುಖಂಡರಾದ ಪಾಣತ್ತಲೆ ವಿಶ್ವನಾಥ್, ಸಂಪಾಜೆ ಆದಂ, ಎಸ್.ಹೆಚ್ ಮತೀನ್, ಪಿ.ಎ ಮಂಜುನಾಥ್, ಅಮ್ಮಂಡ ವಿವೇಕ್, ಮಂಡೆಪಂಡ ಮದನ್, ಮುತ್ತಪ್ಪ, ಹರ್ಷ, ಪರಮಾಲೆ ಗಣೇಶ್, ಅಜ್ಜಮಾಡ ಮುತ್ತಮ್ಮ, ಶಂಕ್ರು ನಾಚಪ್ಪ, ಅಮ್ಮತ್ತಿ ಜಯಮ್ಮ, ಪಂದಿಯಂಡ ರವಿ, ಇಟ್ಟೀರ ಸಂಪತ್, ಸಕ್ಲೈನ್, ನೂರ್, ಅಯಾಸ್, ಅಶ್ರಫ್ ಅಲಿ, ಸುಮಿತ್ರ, ವೀಣಾ, ವಲ್ಲಂಡ ಕಮಲ, ಸರಸ್ವತಿ, ಆರ್ಮುಗಂ, ಬಾಳೆಲೆಯ ಮಾಪಂಗಡ ಟಾಟು, ಮುಕ್ಕಾಟೀರ ಗಣೇಶ್, ಶಿವನಂಜಪ್ಪ, ಸಜ್ಜು ಮೊಣ್ಣಪ್ಪ, ನಾಪಂಗಡ ಅಪ್ಪಣ್ಣ ಮುಂತಾದವರು ಉಪಸ್ಥಿತರಿದ್ದರು.

Translate »