ಪೊನ್ನಂಪೇಟೆಯಲ್ಲಿ ಗುರುಪೂರ್ಣಿಮಾ ದಿನಾಚರಣೆ: ‘ಕರುಣಾಸಿಂಧು ಶ್ರೀರಾಮಕೃಷ್ಣ ಪರಮಹಂಸ’ ಕೊಡವ ಭಾಷೆ ಪುಸ್ತಕ ಲೋಕಾರ್ಪಣೆ
ಕೊಡಗು

ಪೊನ್ನಂಪೇಟೆಯಲ್ಲಿ ಗುರುಪೂರ್ಣಿಮಾ ದಿನಾಚರಣೆ: ‘ಕರುಣಾಸಿಂಧು ಶ್ರೀರಾಮಕೃಷ್ಣ ಪರಮಹಂಸ’ ಕೊಡವ ಭಾಷೆ ಪುಸ್ತಕ ಲೋಕಾರ್ಪಣೆ

July 29, 2018

ಗೋಣಿಕೊಪ್ಪಲು:  ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿವ ದಿನಾಚರಣೆ ಯಶಸ್ವಿಯಾಗಿ ಜರುಗಿತು. ಮೈಸೂರಿನ ಬೇಲೂರು ಮಠದ ಟ್ರಸ್ಟಿ ಸ್ವಾಮಿ ಮುಕ್ತಿ ನಂದಾಜೀ ಮಹಾರಾಜ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಆಶ್ರಮದ ಸಭಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತ ರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮಿ ಮುಕ್ತಿನಂದಾಜೀ ಮಹಾರಾಜ್ ಅವರು, ಇಂದು ಆದ್ಯಾತ್ಮಿಕ ಬೆಳವಣಿಗೆ ಕಡಿಮೆಯಾಗುತ್ತಿದೆ ಭಗವಂತನಲ್ಲಿ ನಂಬಿಕೆ ಇಡಬೇಕಾಗಿದೆ. ರಾಮಕೃಷ್ಣ ಪರಮಹಂಸರ ಜೀವನ ಮತ್ತು ಸಂದೇಶವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಎಲ್ಲಾ ಧರ್ಮದ ಸಂಸ್ಕೃತಿಗೆ ತನ್ನದೇ ಆದ ಗೌರವವಿದೆ. ನಾನು ಎಂಬ ಅಹಂ ಅನ್ನು ಬಿಡುವ ಮೂಲಕ ಸಮಾಜದ ಕಾರ್ಯದಲ್ಲಿ ಎಲ್ಲರೂ ಭಾಗಿಗಳಾಗಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ,
ಇಂದು ವೃದ್ದಾ ಪ್ಯದಲ್ಲಿರುವ ಹೆತ್ತ ತಂದೆ ತಾಯಿಯನ್ನು ನೋಡುವ ಸೌಜನ್ಯ ಇಲ್ಲದಂತಾಗಿದೆ. ಹೆತ್ತ ತಂದೆ ತಾಯಿಗಳು ಮಾಡಿರುವ ಆಸ್ತಿ ಹಣದಿಂದ ಐಷರಾಮಿ ಬದುಕನ್ನು ಕಟ್ಟಿ ಕೊಂಡು ಇರುವವರು ಈ ರೀತಿ ಮಾಡುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸಮಾಜದಲ್ಲಿ ಉತ್ತಮರು ಎನಿಸಿ ಕೊಂಡಿರುವವರು ತಮ್ಮ ತಂದೆ ತಾಯಿಗಳಿಗೆ ವೃದ್ದಾಶ್ರಮದಲ್ಲಿ ಆಶ್ರಯ ನೀಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಚರಾಸ್ತಿ ಮಾಡುವ ಬದಲು ತಮ್ಮ ಮಕ್ಕಳನ್ನು ಸ್ತಿರಾಸ್ಥಿ ಎಂದು ಭಾವಿಸಿ ಉತ್ತಮವಾದ ವಿದ್ಯಾಭ್ಯಾಸ ಕೊಡಿಸುವ ಮೂಲಕ ಐಎಎಸ್, ಐಪಿಎಸ್, ಐಎಫ್‍ಎಸ್ ಮಾಡಿಸಲು ಪ್ರಯತ್ನಿಸ ಬೇಕೆಂದು ತಿಳಿಸಿದರು.

ಕೂರ್ಗ್‍ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಕೆ.ಪಿ.ಉತ್ತಪ್ಪ ಮಾತನಾಡುತ್ತಾ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಮುಂದೆ ಬರಬೇಕು. ಆ ಮೂಲಕ ಸಮಾಜದ ಕಾರ್ಯಗಳಲ್ಲಿ ಜನತೆ ತೊಡ ಗಿಸಿಕೊಳ್ಳಬೇಕೆಂದರು.

ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಬೋದಸ್ವರೂಪ ನಂದಾಜೀ ಮಹರಾಜ್ ಮಾತನಾಡಿ, ಆಶ್ರಮದ ಏಳಿಗೆಗೆ ನಾಡಿನ ಅಪಾರ ಸಂಖ್ಯೆಯ ಧಾನಿಗಳ ಸಹಾಯವಿದೆ. ಪ್ರತಿನಿತ್ಯ ಹಲವು ಕಾರ್ಯಕ್ರಮಗಳನ್ನು ಆಶ್ರಮದ ವತಿಯಿಂದ ನಡೆಸಲಾಗುತ್ತಿದೆ. ‘ಕರುಣಾಸಿಂಧು ಶ್ರೀರಾಮಕೃಷ್ಣ ಪರಮಹಂಸ’ ಎಂಬ ಆರು ನೂರು ಪುಟದ ಪುಸ್ತಕವನ್ನು ಹೊಟ್ಟೇಂ ಗಡ ಸುಂದರಿ ಮೇದಪ್ಪ ಕೊಡವ ಭಾಷೆಯಲ್ಲಿ ಬರೆಯುವ ಮೂಲಕ ಕೊಡಗು ಜಿಲ್ಲೆಯು ಇತಿಹಾಸ ಪುಟದಲ್ಲಿ ನೆನಪಿಸು ವಂತಹ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ಕೆ ಸತತ ಏಳು ವರ್ಷಗಳ ಪರಿಶ್ರಮವಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಇಂತಹ ಪುಸ್ತಕವನ್ನು ಬರೆದಿದ್ದಾರೆ. ಈ ಸಂದರ್ಭ ದಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡು ತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದ ಅವರು ಕೊಡವ ಭಾಷೆಯಲ್ಲಿ ಬರೆದಿರುವ ‘ಕರುಣಾಸಿಂಧು ಶ್ರೀರಾಮಕೃಷ್ಣ ಪರಮ ಹಂಸ’ ಪುಸ್ತಕವನ್ನು ಪ್ರತಿ ಕುಟುಂಬವೂ ಓದುವ ಮೂಲಕ ವಿಷಯ ತಿಳಿದುಕೊಳ್ಳ ಬೇಕೆಂದು ಆಗಮಿಸಿದ ಭಕ್ತರಿಗೆ ಕರೆ ನೀಡಿದರು.

ಆಶ್ರಮದ ಹಿರಿಯ ಸ್ವಾಮೀಜಿಗಳಾದ ಜಗದಾತ್ಮಾನಂದಾಜೀ ಮಹರಾಜ್, ಶಾಶ್ವತ ವಾದ ಪುಣ್ಯ ಕಾರ್ಯವನ್ನು ವ್ಯಕ್ತಿಯ ಅಭ್ಯುದಯ ಮತ್ತು ಸಮಾಜದ ಎಲ್ಲಾರ ಕಲ್ಯಾ ಣಕ್ಕೆ ಕಾರಣರಾದ ಭಗವಾನ್ ಶ್ರೀ ರಾಮ ಕೃಷ್ಣರ ದಿವ್ಯ ಮಂಗಳ ಚರಿತ್ರೆಯನ್ನು ಸರಳ ಸುಂದರ ಕೊಡವ ಭಾಷೆಯಲ್ಲಿ ಶ್ರಮ ವಹಿಸಿ ಬರೆದಿರುವ ಸುಂದರಿ ಮೇದಪ್ಪನವರ ಕಾರ್ಯವನ್ನು ಶ್ಲಾಘಿಸಿದರು.

ಕೊಡವ ಭಾಷೆಯಲ್ಲಿ ಪುಸ್ತಕ ಬರೆದ ಲೇಖಕಿ ಹೊಟ್ಟೇಂಗಡ ಸುಂದರಿ ಮೇದಪ್ಪ ಮಾತನಾಡಿ, ಪುಸ್ತಕ ಬರೆಯಲು ಸತತ ಏಳು ವರ್ಷಗಳ ಸಮಯ ಪಡೆದು ಕೊಂಡಿದ್ದೇನೆ. ಪುಸ್ತಕ ಬಿಡುಗಡೆಗೆ ದಾನಿಗಳು ಸಹಕರಿಸಿದ್ದಾರೆ. ಆರುನೂರು ಪುಟಗಳುಳ್ಳ ಕರುಣಾಸಿಂಧು ಶ್ರೀರಾಮ ಕೃಷ್ಣ ಪರಮಹಂಸ ಈ ಪುಸ್ತಕ ಬಿಡುಗಡೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಆಶ್ರಮದ ವತಿಯಿಂದ ಸ್ವಾಮೀಜಿಗಳು, ಗಣ್ಯರು ಲೇಖಕಿ ಹೊಟ್ಟೇಂಗಡ ಸುಂದರಿ ಮೇದಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮವನ್ನು ಚಂದನ್ ಕಾಮತ್ ನಿರೂಪಿಸಿದರು.

Translate »