ಮೈಸೂರು ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮಗೊಳಿಸಲು ಹೈಕೋರ್ಟ್ ಆದೇಶ
ಮೈಸೂರು

ಮೈಸೂರು ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮಗೊಳಿಸಲು ಹೈಕೋರ್ಟ್ ಆದೇಶ

June 15, 2019

ಮೈಸೂರು: ಮೈಸೂರಿನ ದೇವರಾಜ ಮಾರು ಕಟ್ಟೆಯನ್ನು ನೆಲಸಮಗೊಳಿಸಿ, ಹೊಸದಾಗಿ ನಿರ್ಮಿಸುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದ್ದಾರೆ.

ನಗರ ಪಾಲಿಕೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೆಲ ಮಳಿಗೆಯವರು ಮಾರುಕಟ್ಟೆಯನ್ನು ಒಡೆಯದೆ ಪುನರುಜ್ಜೀವಗೊಳಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಒಡೆದು ಹಾಕಿ, ಹೊಸದಾಗಿ ಕಟ್ಟುವಂತೆ ಆದೇಶಿಸಿದೆ ಎಂದು ನಮ್ಮ ಅಧಿಕಾರಿಗಳು ತಿಳಿಸಿದ್ದಾರೆ.

ಮಾರುಕಟ್ಟೆ ನವೀಕರಣ ಸಂದರ್ಭದಲ್ಲೇ ಒಂದು ಭಾಗ ಕುಸಿದಿತ್ತು. ನಂತರದಲ್ಲಿ ಸಂಪೂರ್ಣ ಕೆಡವಿ, ಹೊಸದಾಗಿ ನಿರ್ಮಿಸಲು ಕೌನ್ಸಿಲ್ ನಿರ್ಣಯ ಮಾಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಡುವೆ ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳಬೇಕೆಂಬ ಅಭಿಪ್ರಾಯವೂ ಕೇಳಿಬಂತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ ಸ್ಥಳ ಪರಿಶೀಲನೆ ನಡೆಸಿದ್ದರು. ಸದ್ಯ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ. ಸರ್ಕಾರದ ಸೂಚನೆಯಂತೆ ನಾವು ಮುಂದುವರೆಯುತ್ತೇವೆ ಎಂದು ಮೇಯರ್ ಹೇಳಿದ್ದಾರೆ.

Translate »