72.5 ಲಕ್ಷ ವೆಚ್ಚದ 5 ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು

72.5 ಲಕ್ಷ ವೆಚ್ಚದ 5 ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ

July 30, 2018

ಮೈಸೂರು:  ಮೈಸೂರಿನ ವಾರ್ಡ್ ನಂ.64ರಲ್ಲಿ ಸುಮಾರು 72.5 ಲಕ್ಷ ರೂ.ವೆಚ್ಚದ 5 ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ. ರಾಮದಾಸ್ ಭಾನುವಾರ ಚಾಲನೆ ನೀಡಿದರು.

ಈ ವಾರ್ಡಿನಲ್ಲಿ ಪಾದಯಾತ್ರೆ ನಡೆಸಿದ ವೇಳೆ ಸಾರ್ವಜನಿಕರು ತುರ್ತು ಆಗಬೇಕಿದ್ದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಬೇಕೆಂದು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ವಿವೇಕಾನಂದ ವೃತ್ತದ ಬಸ್ ನಿಲ್ದಾಣದ ಸಮೀಪ 10 ಲಕ್ಷ ರೂ. ವೆಚ್ಚದ ಸಾರ್ವಜನಿಕರ ಶೌಚಾಲಯ ನಿರ್ಮಾಣ, 15 ಲಕ್ಷ ವೆಚ್ಚದಲ್ಲಿ ಶನಿದೇವರ ದೇವ ಸ್ಥಾನದಿಂದ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆ ಅಭಿವೃದ್ಧಿ, 27.5 ಲಕ್ಷ ವೆಚ್ಚದಲ್ಲಿ ಮಧುವನ ಬಡಾವಣೆಯ ಬ್ಲಾಕ್ 3-10 ರವರೆಗಿನ ರಸ್ತೆಗಳ ಅಭಿವೃದ್ಧಿ, 15 ಲಕ್ಷ ವೆಚ್ಚದಲ್ಲಿ ಅರವಿಂದನಗರ 13ನೇ ಕ್ರಾಸ್‍ನ ಉದ್ಯಾನವನ ಅಭಿವೃದ್ಧಿ ಹಾಗೂ 5 ಲಕ್ಷ ವೆಚ್ಚದಲ್ಲಿ ಅರವಿಂದನಗರ ಆಸ್ಪತ್ರೆಯ ಮುಂಭಾಗದ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಭಾನುವಾರ ಬೆಳಿಗ್ಗೆ ವಾರ್ಡ್ ನಂ.57ರ ಉಮಾಮಹೇಶ್ವರಿ ದೇವಸ್ಥಾನ, ವಾಟರ್ ಟ್ಯಾಂಕ್, ಆಂಜನೇಯ ದೇವಸ್ಥಾನ, ಹಾಲಿನ ಬೂತ್ 3ನೇ ಹಂತ, ಹೊಂಗೆ ಮರದ ಪಾರ್ಕ್, ಮಸಣಿಕಮ್ಮ ದೇವಸ್ಥಾನ, ಸೌಗಂಧಿಕ ಉದ್ಯಾನವನ, ಲವಕುಶ ಉದ್ಯಾ ನವನ, ಚಿನ್ಮಯಿ ತನ್ಮಯಿ ಉದ್ಯಾನವನ, ಕೆ ಬ್ಲಾಕ್ ಗಣಪತಿ ದೇವಸ್ಥಾನ ಮತ್ತಿತರ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದರು.

ಈ ವೇಳೆ ಸಾರ್ವಜನಿಕರೊಬ್ಬರು, ಉಮಾ ಮಹೇಶ್ವರಿ ದೇವಸ್ಥಾನ, ಉದ್ಯಾ ನವನಗಳ ಅಭಿವೃದ್ಧಿಯಾಗಬೇಕು. ಜತೆಗೆ ಉದ್ಯಾನವನದಲ್ಲಿ ದುಶ್ಚಟಗಳು ನಡೆಯುತ್ತಿದ್ದು, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಶಾಸಕ ರಾಮ ದಾಸ್ ಪ್ರತಿಕ್ರಿಯಿಸಿ, ಉದ್ಯಾನವನದಲ್ಲಿ ಯಾವುದೇ ದುಶ್ಚಟಗಳು ನಡೆಯದಂತೆ ಪೊಲೀಸರು ಮುಂಜಾಗೃತೆ ವಹಿಸಬೇಕು. ಪ್ರತಿನಿತ್ಯ ಗರುಡ ಪೊಲೀಸರು ಉದ್ಯಾನವನಕ್ಕೆ ಭೇಟಿ ನೀಡಬೇಕು. ಯಾವುದೇ ದುಶ್ಚಟಗಳನ್ನು ಮಾಡುತ್ತಿದ್ದರೆ ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕೆಂದ ಅವರು, 1 ವಾರದಲ್ಲಿ ಉದ್ಯಾನವನಕ್ಕೆ ನೀರು, ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕೆಲವು ಪ್ರದೇಶಗಳು ರಸ್ತೆಗಿಂತ ತಳ ಮಟ್ಟದಲ್ಲಿರುವುದರಿಂದ ಮಳೆಯ ನೀರು ಮನೆಗೆ ನುಗ್ಗುತ್ತದೆ ಎಂದು ಸಾರ್ವಜನಿಕರು ಸಮಸ್ಯೆ ತೆರೆದಿಟ್ಟರು. ಇದಕ್ಕೆ ರಾಮದಾಸ್ ಪ್ರತಿಕ್ರಿಯಿಸಿ, ಚರಂಡಿಗಳು ತ್ಯಾಜ್ಯಗಳಿಂದ ತುಂಬಿದ್ದು, ಅವುಗಳನ್ನು ತೆಗೆದು ಸಮಸ್ಯೆ ಬಗೆಹರಿಸಬೇಕು. ಜತೆಗೆ ವಿದ್ಯುತ್ ಸಂಪರ್ಕಕ್ಕೆ ಅಡಚಣೆಯನ್ನುಂಟು ಮಾಡುವ ಮರಗಳಿದ್ದರೆ ಕೊಂಬೆಗಳನ್ನು ತೆರವುಗೊ ಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಶಾಂತಿಸಾಗರ್ ಕಾಂಪ್ಲೆಕ್ಸ್ ಎದುರು ರಸ್ತೆಯ ಫುಟ್‍ಪಾತ್‍ನಲ್ಲೇ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗಿದೆ.

ಜತೆಗೆ ರಾಮಕೃಷ್ಣನಗರ- ವಿವೇಕಾನಂದನಗರದ ಕಡೆಯಿಂದ ಬರುವ ಬಸ್‍ಗಳು ಬೇರೆ ಬೇರೆ ಸ್ಥಳದಲ್ಲಿ ನಿಲ್ಲಿಸುವುದರಿಂದ ಬಸ್ ಹತ್ತಲು ಓಡುವ ವೇಳೆ ಅಪಘಾತಗಳು ಸಂಭವಿಸುತ್ತಿವೆ ಎಂಬ ಸಮಸ್ಯೆಗೆ ಪ್ರತಿ ಕ್ರಿಯಿಸಿ, ಸಂಬಂಧಪಟ್ಟ ಪಾಲಿಕೆ ಅಧಿಕಾರಿ ಗಳು, ಸಾರಿಗೆ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಕುವೆಂಪುನಗರ ಕೆ.ಬ್ಲಾಕ್‍ನಲ್ಲಿ 4 ತಿಂಗಳ ಹಿಂದಷ್ಟೇ ಹಾಕಿದ್ದ ರಸ್ತೆ ಡಾಂಬರೀಕರಣ ಕಾಮಗಾರಿ ಕಳಪೆಯಿಂದ ಕೂಡಿದ್ದು, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ, ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಬಿಲ್ ಮೊತ್ತವನ್ನು ತಡೆಹಿಡಿಯುವಂತೆ ಸೂಚಿಸಲಾಗಿದೆ ಎಂದರು.

14ನೇ ವಾರ್ಡ್‍ನ ಸದಸ್ಯ ಎಂ.ಬಿ. ಜಗದೀಶ್, ಕಿರಿಯ ಅಭಿಯಂತರ ಕಿರಣ್, ವಾರ್ಡ್ ಅಧ್ಯಕ್ಷರಾದ ನಾರಾಯಣ್‍ರಾವ್, ನಾಗರಾಜು, ಕುಮಾರ್, ಪಚ್ಚು, ಲೋಕೇಶ್, ಜಿ.ಆರ್.ನಾಗರಾಜ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »