ಮಂಡ್ಯ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ ಮಂಡ್ಯ ಜಿಲ್ಲಾದ್ಯಂತ ಸಂಪೂರ್ಣ ವಿಫಲವಾಗಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿ ಸಿದ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಬಗ್ಗೆ ದ್ವಂದ್ವ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಬಂದ್ಗೆ ಕರೆ ನೀಡಿದ್ದರು. ಹೀಗಾಗಿ ಸೋಮ ವಾರ ನಡೆದ ರಾಜ್ಯ ಬಂದ್ಗೆ ಯಾವುದೇ ಸಂಘಟನೆ ಬೆಂಬಲ ಸೂಚಿಸದ ಹಿನ್ನೆಲೆ ಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತ ವಾಗಿದೆ.
ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ನಾಗ ಮಂಗಲ, ಕೆ.ಆರ್.ಪೇಟೆ ತಾಲೂಕಿನಲ್ಲೂ ಬಂದ್ಗೆ ಬೆಂಬಲ ವ್ಯಕ್ತವಾಗಿಲ್ಲ. ಮಂಡ್ಯ ದಲ್ಲಿ ಬಂದ್ಗೆ ಯತ್ನಿಸಿದ ಬಿಜೆಪಿಯ 20ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಪಾಂಡವಪುರದಲ್ಲಿ ಪ್ರತಿಭಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಬಂಧನಕ್ಕೊಳ ಪಟ್ಟರೆ, ಬೇರೆಲ್ಲೂ ದೊಡ್ಡಮಟ್ಟದ ಯಾವುದೇ ಹೋರಾಟ ನಡೆದಿಲ್ಲ. ಅಲ್ಲಲ್ಲಿ ಬೆರಳೆ ಣ ಕೆಯ ಬಿಜೆಪಿ ಕಾರ್ಯಕರ್ತರು ಪ್ರತಿ ಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದನ್ನು ಹೊರತುಪಡಿಸಿದರೇ, ಬೇರಾವ ಸಂಘಟನೆಗಳ ಕಾರ್ಯ ಕರ್ತರು ಬೀದಿಯಲ್ಲಿ ಕಾಣ ಸಿಕೊಳ್ಳಲಿಲ್ಲ.
ಮಂಡ್ಯ: ನಗರದಲ್ಲಿ ಬಿಜೆಪಿ ಕರೆ ನೀಡಿದ್ದ ಬಂದ್ ಸಂಪೂರ್ಣ ವಿಫಲ ವಾಗಿದೆ. ಯಾವುದೇ ರೈತಪರ ಸಂಘಟನೆ ಗಳು ಸಹ ಬೀದಿಗಿಳಿಯಲಿಲ್ಲ. ಬಂದ್ ಹೋರಾಟ ಕೇವಲ ಬಿಜೆಪಿ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು. ಬಸ್ ಮತ್ತಿತರ ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳು, ಆಟೋ ಸಂಚಾರ ಎಂದಿನಂತೆ ಇತ್ತು. ಸಹಜ ಸ್ಥಿತಿಯಲ್ಲಿ ಜನಜೀವನ ಕೂಡ ಸಾಗಿತ್ತು. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು ಗಳು ಎಂದಿನಂತೆ ತೆರೆದಿದ್ದವು.
20ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ: ನಗರದಲ್ಲಿಂದು ಬೆಳಿಗ್ಗೆ ಸಂಜಯ ವೃತ್ತ ದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ, ರಸ್ತೆ ತಡೆ ಜೊತೆಗೆ ಬೀದಿ ಬೀದಿ ಗಳಲ್ಲಿ ತೆರಳಿ ಬಂದ್ಗೆ ಬೆಂಬಲ ನೀಡು ವಂತೆ ವರ್ತಕರಿಗೆ ಮನವಿ ಮಾಡುವ ಪ್ರಯತ್ನ ಮಾಡಿದರು. ಈ ವೇಳೆ ಭದ್ರತೆ ಯಲ್ಲಿದ್ದ ಪೊಲೀಸರು, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಪ್ರಯತ್ನಕ್ಕೆ ಸಿದ್ಧರಾಗುತ್ತಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ನಗರ ಘಟಕಾ ಧ್ಯಕ್ಷ ಬೇಕರಿ ಅರವಿಂದ್, ಚಂದಗಾಲು ಶಿವಣ್ಣ, ಶಿವಕುಮಾರ್ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರು, ಮುಖಂಡರನ್ನು ಬಂಧಿಸಿ, ಮಧ್ಯಾಹ್ನದ ವೇಳೆಗೆ ಬಿಡುಗಡೆ ಗೊಳಿಸಿದರು. ಬಂದ್ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಮದ್ದೂರು: ರೈತರ ಸಾಲ ಮನ್ನಾ ಮಾಡದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಸಂಪೂರ್ಣ ವಿಫಲಗೊಂಡಿತು. ಪಟ್ಟಣದಲ್ಲಿ ಬೆಳಿಗ್ಗೆ ಎಂದಿನಂತೆ ಅಂಗಡಿಗಳನ್ನು ತೆರೆಯಲಾಗಿತ್ತು. ಬಿಜೆಪಿ ಕಾರ್ಯಕರ್ತರು ಪ್ರವಾಸಿ ಮಂದಿರ ದಿಂದ ಬೈಕ್ ರ್ಯಾಲಿ ಮೂಲಕ ಆಗಮಿಸಿ ಅಂಗಡಿಗಳನ್ನು ಮುಚ್ಚಿಸಿದರು. ಆದರೆ ಪ್ರತಿಭಟನಾಕಾರರು ಹೋಗುತ್ತಿದ್ದಂತೆ ಇತ್ತ ವರ್ತಕರು ಅಂಗಡಿ ತೆರೆದು ತಮ್ಮ ವಹಿ ವಾಟು ಮುಂದುವರಿಸಿದರು.
ರ್ಯಾಲಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಸತೀಶ್, ಜಿಲ್ಲಾ ಕಾರ್ಯದರ್ಶಿ ರೂಪ, ಯುವ ಮೋರ್ಚಾ ಉಪಾಧ್ಯಕ್ಷ ಗುರು ಮಲ್ಲೇಶ್, ಕ್ಷೇತ್ರ ಪ್ರದಾನ ಕಾರ್ಯದರ್ಶಿ ಎಂ.ಸಿ.ಸಿದ್ದು, ಜಿ.ಸಿ.ಮಹೇಂದ್ರ, ಮುಖಂಡ ಕೆಂಪು ಬೋರಯ್ಯ, ಸ್ವಾಮಿ ಇತರರಿದ್ದರು.
ಪಾಂಡವಪುರ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಫೈವ್ಲೈಟ್ ವೃತ್ತದಲ್ಲಿ ಶ್ರೀರಂಗ ಪಟ್ಟಣ-ಜೇವರ್ಗಿ ಮುಖ್ಯರಸ್ತೆ ತಡೆದು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು, ಮಂಡ್ಯ ವೃತ್ತ, ರಾಜಾ ಮೆಡಿಕಲ್ ಸ್ಟೋರ್ ವೃತ್ತ, ಹಿರೇಮರಳಿ ಆಟೋ ಸರ್ಕಲ್ಗಳಲ್ಲಿ ಪ್ರತಿಭಟನೆ ನಡೆಸಿ ಅಂಗಡಿ ಮುಂಗಟ್ಟು ಗಳನ್ನು ಮುಚ್ಚಿ ಬಂದ್ಗೆ ಸಹಕರಿಸುವಂತೆ ಮಾಲೀಕರಿಗೆ ಮನವಿ ಮಾಡಿದರು. ಇದಕ್ಕೆ ಅಂಗಡಿ ಮಾಲೀಕರು ಸ್ಪಂದಿಸದ ಹಿನ್ನೆಲೆಯಲ್ಲಿ ಬಲವಂತವಾಗಿ ಅಂಗಡಿ ಗಳ ಬಾಗಿಲು ಮುಚ್ಚಿಸಲು ಮುಂದಾದರು. ಈ ವೇಳೆ ಸರ್ಕಲ್ ಇನ್ಸ್ ಪೆಕ್ಟರ್ ಶಂಕರಚಾರಿ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಕೆಲ ಸಮಯದ ಬಳಿಕ ಬಿಡು ಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತ ರಾದ ಹೆಚ್.ಎನ್.ಮಂಜುನಾಥ್, ಧನಂಜಯ್, ಕೃಷ್ಣ, ಶಂಕರೇಗೌಡ, ವೆಂಕಟರಾಮೇಗೌಡ, ಶ್ರೀನಿವಾಸ್ನಾಯ್ಕ, ಸಂದೇಶ್, ಮಧು, ರಾಜಶೇಖರ್, ನಿಂಗೇ ಗೌಡ, ಚನ್ನೇಗೌಡ ಹಾಜರಿದ್ದರು.
ಕೆ.ಆರ್.ಪೇಟೆ: ರಾಜ್ಯ ಬಿಜೆಪಿ ಕರೆ ನೀಡಿದ ಸ್ವಯಂ ಪ್ರೇರಿತ ಬಂದ್ಗೆ ಮಾಜಿ ಸಿಎಂ ಯಡಿಯೂರಪ್ಪ ತವರೂರು ಕೆ.ಆರ್. ಪೇಟೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ರಾಜ್ಯ ಬಿಜೆಪಿ ಮುಖಂಡರು ಕರೆ ನೀಡಿದ್ದ ಸ್ವಯಂ ಪ್ರೇರಿತ ರಾಜ್ಯ ಬಂದ್ಗೆ ತಾಲೂಕಿನಲ್ಲಿ ಯಾವುದೇ ಪ್ರತಿಕ್ರಿಯೆ ಕಂಡು ಬರಲಿಲ್ಲ. ಶಾಲಾ-ಕಾಲೇಜುಗಳು, ಬಸ್, ಆಟೋ, ಖಾಸಗಿ ಬಸ್ ಗಳ ಸಂಚಾರ ಎಂದಿನಂತಿತ್ತು. ಅಂಗಡಿ, ಮುಂಗಟ್ಟುಗಳು ತೆರೆದಿದ್ದವು.
ಶ್ರೀರಂಗಪಟ್ಟಣ: ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕಚೇರಿ ಎದುರು ಬಿಜೆಪಿ ರೈತ ಮುಖಂಡ ಕೆ.ಎಸ್.ನಂಜುಂಡೇ ಗೌಡರ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 24 ಗಂಟೆ ಯೊಳಗೆ ರೈತರ, ಸ್ತ್ರೀ-ಶಕ್ತೀ ಸಂಘಗಳ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿ ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೂಡಲೇ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.
ನಂತರ ತಹಶೀಲ್ದಾರ್ ನಾಗೇಶ್ಗೆ ಮನವಿ ಸಲ್ಲಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಶ್ರೀಧರ್, ರಾಷ್ಟ್ರೀಯ ಸಮಿತಿ ಪರಿಷತ್ ಸದಸ್ಯ ಕೆ.ಬಲರಾಂ, ಪುರಸಭಾ ಸದಸ್ಯ ಉಮಾಶಂಕರ್, ತಾಲೂಕು ಉಪಾಧ್ಯಕ್ಷ ರಮೇಶ್, ಮುಖಂಡರಾದ ಉಮೇಶ್ ಕುಮಾರ್, ಬಿ.ಸಿ.ಕೃಷ್ಣೇಗೌಡ ಸೇರಿದಂತೆ ಇತರರು ಪ್ರತಿಭಟನೆಯ ಲ್ಲಿದ್ದರು.